ಕಠ್ಮಂಡು: ನೇಪಾಳದ ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ಸಚಿವ ರವೀಂದ್ರ ಅಧಿಕಾರಿ ಪ್ರಯಾಣಿಸುತ್ತಿದ್ದ ಖಾಸಗಿ ವಿಮಾನ ಪೂರ್ವ ನೇಪಾಳದ ತಾಪ್ಲೇಜುಂಗ್ ಜಿಲ್ಲೆಯಲ್ಲಿ ಪತನಗೊಂಡ ಪರಿಣಾಮ ಸಚಿವರು ಸೇರಿ ಏಳು ಮಂದಿ ಮೃತಪಟ್ಟಿರುವುದಾಗಿ ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ ದೃಢಪಡಿಸಿದೆ.
ದುರಂತಕ್ಕೀಡಾಗಿರುವ ಏರ್ ಡೈನಸ್ಟಿ ಸಂಸ್ಥೆಯ ಹೆಲಿಕಾಪ್ಟರ್ನಲ್ಲಿ ಸಚಿವ ರವೀಂದ್ರ, ಕ್ಯಾಪ್ಟನ್ ಪ್ರಭಾಕರ್ ಕೆ.ಸಿ., ಉದ್ಯಮಿ ಅಂಗ್ ಛಿರಂಗ್ ಶೆರ್ಪ, ಪ್ರಧಾನಿ ಆಪ್ತ ಯುವರಾಜ್ ದಹಾಲ್, ವೀರೇಂದ್ರ ಪ್ರಸಾದ್ ಶ್ರೇಷ್ಠ ಮತ್ತಿಬ್ಬರು ಪ್ರಯಾಣಿಸುತ್ತಿದ್ದರು.
ದುರಂತ ನಡೆದ ಪಥಿಬರ ಪ್ರದೇಶದಲ್ಲಿ ಸ್ಫೋಟದ ಸದ್ದು ಹಾಗೂ ದಟ್ಟ ಹೊಗೆಯನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು ಎಂದು ತಾಪ್ಲೇಜುಂಗ್ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿರುವುದಾಗಿ ‘ಹಿಮಾಲಯನ್ ಟೈಮ್ಸ್’ ವರದಿ ಮಾಡಿದೆ. ಸಚಿವರು ಪಥಿಬರದ ದೇವಾಲಯಕ್ಕೆ ಭೇಟಿ ನೀಡಿ ಅಲ್ಲಿಂದ ಚೌಹಾಣ್ ದಾಂಡದಲ್ಲಿ ನಿರ್ಮಾಣ ಹಂತದಲ್ಲಿರುವ ವಿಮಾನನಿಲ್ದಾಣಕ್ಕೆ ತೆರಳುವ ಕಾರ್ಯಕ್ರಮವಿತ್ತು.