ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತಿ, ಸಂಭ್ರಮದ ಹೂವಿನ ಕರಗ ಶಕ್ತ್ಯುತ್ಸವ

ನಗರದಾದ್ಯಂತ ಸಂಚರಿಸಿದ ಮೆರವಣಿಗೆ, ಮಹಿಳಾ ಪೂಜಾರಿ ಕರಗದ ವೈಶಿಷ್ಟ್ಯ, ಮನರಂಜಿಸಿದ ವಿವಿಧ ಕಲಾತಂಡಗಳು
Last Updated 28 ಮೇ 2018, 10:27 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದಲ್ಲಿ ಶನಿವಾರ ರಾತ್ರಿ ಆರಂಭಗೊಂಡ ಬಾಪೂಜಿ ನಗರದ ಮಹೇಶ್ವರಿ ದೇವಾಲಯದ 57ನೇ ವರ್ಷದ ದ್ರೌಪತಮ್ಮನವರ ಹೂವಿನ ಕರಗ ಶಕ್ತ್ಯುತ್ಸವ ಭಾನುವಾರ ಬೆಳಿಗ್ಗೆ 11 ಗಂಟೆ ವರೆಗೆ ನಗರದಾದ್ಯಂತ ವೈಭವಪೂರ್ಣವಾಗಿ ನಡೆಯಿತು. ನೆರೆಹೊರೆಯ ಗ್ರಾಮಸ್ಥರ ಜತೆಗೆ ಸ್ಥಳೀಯ ಸಾವಿರಾರು ಭಕ್ತರು ಉತ್ಸವಕ್ಕೆ ಸಾಕ್ಷಿಯಾದರು.

ಮಹಿಳೆಯೊಬ್ಬರು ಕರಗದ ಪೂಜಾರಿ ಪಾತ್ರ ನಿರ್ವಹಿಸುವುದು ಈ ಕರಗದ ವೈಶಿಷ್ಟ್ಯ. ಕರಗದ ಪ್ರಯುಕ್ತ ನಗರದ ಪ್ರಮುಖ ರಸ್ತೆಗಳಿಗೆ ದೀಪಾಲಂಕಾರ ಮಾಡಲಾಗಿತ್ತು. ದೇವಸ್ಥಾನದಲ್ಲಿ ಶನಿವಾರ ರಾತ್ರಿ ದ್ರೌಪದಮ್ಮನವರ ಕಲ್ಯಾಣೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು.

ಅರಿಶಿನ ಬಣ್ಣದ ಸೀರೆ ಉಟ್ಟು, ಬಳೆ ತೊಟ್ಟು, ದ್ರೌಪದಿಯಂತೆ ಸರ್ವಾಲಂಕಾರ ಭೂಷಿತರಾಗಿದ್ದ ಕರಗದ ಪೂಜಾರಿ ತಮಿಳುನಾಡು ಮೂಲದ ಪುಟ್ಟಮ್ಮ ಅವರು ಹೂವಿನ ಕರಗ ಹೊತ್ತು ರಾತ್ರಿ 10.30ರ ಸುಮಾರಿಗೆ ಒಂದು ಕೈಯಲ್ಲಿ ಕತ್ತಿ ಮತ್ತೊಂದು ಕೈಯಲ್ಲಿ ಮಂತ್ರದಂಡ ಹಿಡಿದು ಧರ್ಮರಾಯಸ್ವಾಮಿ ದೇವಾಲಯದ ಗರ್ಭಗುಡಿಯಿಂದ ಹೊರಕ್ಕೆ ಬರುತ್ತಿದ್ದಂತೆ ತಮಟೆ ವಾದನ, ಮಂಗಳ ವಾದ್ಯಗಳು ಮೊಳಗಿದವು. ಖಡ್ಗ ಹಿಡಿದಿದ್ದ ವೀರಕುಮಾರರು ‘ಗೋವಿಂದಾ. ಗೋವಿಂದಾ..’ ಎಂದು ನಾಮಸ್ಮರಣೆ ಮಾಡುತ್ತ ಅವರ ಹಿಂದೆ ಹೆಜ್ಜೆ ಹಾಕಿದರು.

ಮಲ್ಲಿಗೆ, ಕನಕಾಂಬರ ಹೂವುಗಳಿಂದ ಆಕರ್ಷಕವಾಗಿ ಕಂಗೋಳಿಸುತ್ತಿದ್ದ ‘ಕರಗ’ ಸೂಸುತ್ತಿದ್ದ ಮಲ್ಲಿಗೆಯ ಪರಿಮಳ ಕರಗದ ಮೆರವಣಿಗೆ ಸಾಗಿದ ದಾರಿಯುದ್ದಕ್ಕೂ ಮನೆ ಮಾಡಿತ್ತು.

ನಗರದ ವಿವಿಧೆಡೆ ಕರಗಧಾರಿಗಳ ಸ್ವಾಗತಕ್ಕೆ ಮನೆಗಳ ಮುಂದೆ ರಂಗೋಲಿ ಬಿಡಿಸಿ, ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ಗಲ್ಲಿ ಗಲ್ಲಿಗಳಲ್ಲಿ ಜನ ರಾತ್ರಿ ಇಡೀ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಕರಗದ ದರ್ಶನ ಪಡೆದರು.

ಭುನವೇಶ್ವರಿ ವೃತ್ತ, ಮರಳು ಸಿದ್ದೇಶ್ವರ ವೃತ್ತದಲ್ಲಿ ನಿರ್ಮಿಸಿದ್ದ ವೇದಿಕೆ ಮೇಲೆ ಕರಗಧಾರಿ ಪುಟ್ಟಮ್ಮ ಅವರು ತಮಟೆ ವಾದನಕ್ಕೆ ಹೆಜ್ಜೆ ಹಾಕುವುದನ್ನು ಅಪಾರ ಪ್ರಮಾಣದ ಭಕ್ತಸಮೂಹ ನೋಡಿ ಪರವಶಗೊಂಡಿತು. ಬಜಾರ್ ರಸ್ತೆ ಸೇರಿದಂತೆ ವಿವಿಧೆಡೆ ರಸಮಂಜರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಆಂಧ್ರಪ್ರದೇಶ, ತಮಿಳುನಾಡು, ಕೇರಳ, ತೆಲಂಗಾಣ ಸೇರಿದಂತೆ ರಾಜ್ಯದ 20ಕ್ಕೂ ಹೆಚ್ಚು ವಿವಿಧ ಜನಪದ ಕಲಾ ತಂಡಗಳು ಈ ಉತ್ಸವದಲ್ಲಿ ಭಾಗವಹಿಸಿದ್ದವು. ವಿಶೇಷವಾಗಿ ಮಂಗಳೂರಿನ ಕುಂದಾಪುರದ ಕಾಡುಜನ ಕುಣಿತ, ಆಂಧ್ರಪ್ರದೇಶದ ಕೋಯಾ ನೃತ್ಯ, ತಮಿಳುನಾಡಿನ ತಮಟೆ ಸಂಗೀತ ನೃತ್ಯ ಕರಗಕ್ಕೆ ಮೆರುಗು ತುಂಬಿದವು.

ಆಂಧ್ರಪದೇಶದ ಕಲಾತಂಡಗಳು ಪ್ರದರ್ಶಿಸಿದ ನವದುರ್ಗೆ, ಅಷ್ಟಲಕ್ಷ್ಮಿ ಮತ್ತು ಅಘೋರಿ ನೃತ್ಯಗಳು ಈ ಬಾರಿಯ ವಿಶೇಷ ಆಕರ್ಷಣೆಯಾಗಿತ್ತು. ಭುವನೇಶ್ವರಿ ವೃತ್ತದಲ್ಲಿ ನೆರೆದಿದ್ದ ಅಪಾರ ಪ್ರಮಾಣದ ಭಕ್ತರು ನೃತ್ಯವನ್ನು ಕಣ್ತುಂಬಿಕೊಳ್ಳುವ ಜತೆಗೆ ಅನೇಕರು ತಮ್ಮ ಮೊಬೈಲ್‌ಗಳಲ್ಲಿ ಮುಗಿಬಿದ್ದು ಚಿತ್ರೀಕರಿಸಿದರು.

ನಗರದಾದ್ಯಂತ ಸಂಚರಿಸಿದ ಕರಗದ ಮೆರವಣಿಗೆಗೆ ಕೀಲುಕುದುರೆ, ಡೊಳ್ಳು ಕುಣಿತ, ಪೂಜಾ ಕುಣಿತ, ತಮಟೆ ವಾದನ ಸೇರಿದಂತೆ ವಿವಿಧ ಜನಪದ ಕಲಾತಂಡಗಳು ಮೆರಗು ತುಂಬಿದವು. ನಗರದ ಬಹುತೇಕ ವಾರ್ಡ್‌ಗಳ ಮುಖ್ಯರಸ್ತೆ ಮತ್ತು ಅಡ್ಡರಸ್ತೆಗಳಲ್ಲಿ ಕರಗ ಸಾಗಿ ಬಂದಾಗ ಸ್ಥಳೀಯರು ಪೂಜೆ ಸಲ್ಲಿ­ಸಿ ಭಕ್ತಿ ಸಮರ್ಪಿಸುತ್ತಿದ್ದ ದೃಶ್ಯಗಳು ಗೋಚರಿಸಿದವು. ನಗರದ ಕೆಲವೆಡೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಎಂ.ಮುನಿಯಪ್ಪ, ಮಾಜಿ ಶಾಸಕರಾದ ಶಿವಾನಂದ, ಅನಸೂಯಮ್ಮ, ನಗರಸಭೆ ಸದಸ್ಯರಾದ ರಫೀಕ್, ಸಿಂಧೂರ್, ಅರುಂಧತಿ ಹರಿಜನ ಅಭಿವೃದ್ಧಿ ಸಂಘದ ಸಂಚಾಲಕ ಎಂ.ಎಸ್.ಸಂದೀಪ್, ಕಾರ್ಯದರ್ಶಿ ಸಿ.ಎನ್.ಮುರುಳಿ ಮೋಹನ್, ಜಂಟಿ ಕಾರ್ಯದರ್ಶಿ ಬಿ.ವಿ.ವೆಂಕಟೇಶ್, ಪದಾಧಿಕಾರಿಗಳು ಕರಗ ಮಹೋತ್ಸವದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT