ಜೆರುಸಲೇಂ: 80 ವರ್ಷಗಳ ಹಿಂದೆ ಯಹೂದಿ ಜನರನ್ನು ಉದ್ದೇಶಿಸಿ ಮಹಾತ್ಮ ಗಾಂಧಿ ಬರೆದಿದ್ದರೆನ್ನಲಾದ ಪತ್ರವನ್ನು ಇಸ್ರೇಲ್ ರಾಷ್ಟ್ರೀಯ ಗ್ರಂಥಾಲಯ (ಎನ್ಎಲ್ಐ) ಅನಾವರಣಗೊಳಿಸಿದೆ.
ಬಾಂಬೆ ಜ್ಯೂವೆನಿಸ್ಟ್ ಸಂಸ್ಥೆ (ಬಿಝಡ್ಎ) ಮುಖ್ಯಸ್ಥಶೋಲೆಟ್ ಅವರಿಗೆ ಎರಡನೇ ವಿಶ್ವ ಮಹಾಯುದ್ಧ ಆರಂಭವಾದ ದಿನವೇ ಪತ್ರ ಬರೆದಿರುವುದು ಕಾಕತಾಳೀಯವಾಗಿದೆ. ‘ಪೀಡಿತ ಯಹೂದಿ ಜನರಿಗೆ ಶಾಂತಿ ಯುಗ ಆರಂಭವಾಗಲಿ’ ಎಂದು ಗಾಂಧಿ ಶುಭ ಹಾರೈಸಿದ್ದಾರೆ.
‘ಈ ಹಾರೈಕೆ, ಯಹೂದಿಗಳ ಮೇಲಿನ ಜಾಗತಿಕ ನಾಯಕರ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ. ಅಲ್ಲದೆ, ನಾಜಿ ಜರ್ಮನಿ ಮುಂದೆ ನೀಡುವ ಕಿರುಕುಳದ ಭೀಕರತೆ ಮತ್ತು ಬಿಡುಗಡೆಯನ್ನೂ ಧ್ವನಿಸುತ್ತಿದೆ’ ಎಂದು ಗ್ರಂಥಾಲಯದ ವಕ್ತಾರರು ಪ್ರತಿಪಾದಿಸಿದ್ದಾರೆ.
‘ಹಳೆಯ ದಾಖಲೆಗಳು ಮತ್ತು ಪುಸ್ತಕಗಳನ್ನು ಡಿಜಿಟಲೀಕರಿಸಲು ಹಾಗೂ ಆರ್ಕೈವ್ ಮೂಲಕ ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಕಾರ್ಯವನ್ನು ಗ್ರಂಥಾಲಯ ಕೈಗೊಂಡಾಗ ಗಾಂಧಿ ಅವರು ಬರೆದ ಈ ಪತ್ರ ಬೆಳಕಿಗೆ ಬಂದಿದೆ’ ಎಂದು ಅವರು ಹೇಳಿದ್ದಾರೆ.
ಪತ್ರವನ್ನು ಎನ್ಎಲ್ಐನ ಜಾಲತಾಣದಲ್ಲಿ ಅನಾವರಣಗೊಳಿಸಲಾಗಿದೆ.