ಸಿಂಗಪುರ : ಸ್ವಯಂ ಪ್ರತ್ಯೇಕವಾಗಿರುವ ಆದೇಶ ಉಲ್ಲಂಘಿಸಿದ ಭಾರತ ಮೂಲದ ವ್ಯಕ್ತಿಗೆ ₹1.87 ಲಕ್ಷದಂಡ ವಿಧಿಸಲಾಗಿದೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ.
ವರ್ದಿರೆಡ್ಡಿ ನಾಗೇಶ್ವರ ರೆಡ್ಡಿ (35) ಈ ಶಿಕ್ಷೆಗೆ ಗುರಿಯಾದವರು. ಫೆಬ್ರುವರಿ 16ರಿಂದ 25 ರವರೆಗೆ ಮನೆಯಲ್ಲಿ ಪ್ರತ್ಯೇಕವಾಗಿರುವಂತೆ ರೆಡ್ಡಿ ಅವರಿಗೆ ತಿಳಿಸಲಾಗಿತ್ತು. ಆದರೆ, ಅವರು ಫೆ. 24 ರಂದು ಅನುಮತಿ ಪಡೆಯದೆ ಹೊರಗೆ ಹೋಗಿದ್ದರು.
ರೆಡ್ಡಿ ಅವರ ಸಹೋದ್ಯೋಗಿಯೊಬ್ಬರಿಗೆ ಸೋಂಕು ತಗುಲಿತ್ತು. ರೆಡ್ಡಿ ಅವರಿಗೆ ಸೋಂಕು ತಗುಲದಿರುವುದು ದೃಢಪಟ್ಟಿತ್ತು. ಆದರೆ, ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ ಕಾರಣ ಅವರನ್ನು ಪ್ರತ್ಯೇಕವಾಗಿರುವಂತೆ ತಿಳಿಸಲಾಗಿತ್ತು.
ಇನ್ನೇನು ಕ್ವಾರಂಟೈನ್ ಅವಧಿ ಮುಗಿಯಲಿದೆ. ಕಚೇರಿಗೆ ಹೋಗಬೇಕು ಎಂಬ ಉತ್ಸಾಹದಲ್ಲಿ ಕೆಲವು ವಸ್ತುಗಳನ್ನು ಖರೀದಿಸಲು ಅವರು ಶಾಪಿಂಗ್ ಮಾಲ್ಗೆ ತೆರಳಿದ್ದರು ಎನ್ನಲಾಗಿದೆ.