ಇಸ್ಲಾಮಾಬಾದ್: ‘ವಾದ ಕೈಬಿಟ್ಟು, ಭಿನ್ನಾಭಿಪ್ರಾಯ ಪರಿಹಾರಕ್ಕೆ ಮಾತುಕತೆಗೆ ಬನ್ನಿ’ ಎಂದು ಪಾಕಿಸ್ತಾನದ ತೀವ್ರಗಾಮಿ ನಾಯಕ ಮೌಲಾನಾ ಫಜಲ್ ಉರ್ ರೆಹಮಾನ್ ನೇತೃತ್ವದ ವಿರೋಧ ಪಕ್ಷಗಳಿಗೆ ಪಾಕಿಸ್ತಾನ ಸರ್ಕಾರ ಆಹ್ವಾನ ನೀಡಿದೆ.
ಶುಕ್ರವಾರ ಸಂಸತ್ತಿನ ಅಧಿವೇಶನದಲ್ಲಿ ಮಾತನಾಡಿದ ಪಾಕಿಸ್ತಾನದ ರಕ್ಷಣಾ ಸಚಿವ ಪರ್ವೇಜ್ ಖಟ್ಟಕ್, ‘ಭಿನ್ನಾಭಿಪ್ರಾಯಗಳಿಗೆ ಪರಿಹಾರ ಕಂಡುಕೊಳ್ಳಲು ಮಾತುಕತೆ ಬನ್ನಿ‘ ಎಂದು ವಿರೋಧ ಪಕ್ಷಗಳಿಗೆ ಆಹ್ವಾನ ನೀಡಿದರು.
‘ಪ್ರತಿಭಟನೆ ಮಾಡಿ, ಆದರೆ, ದೇಶಕ್ಕೆ ಅಪಾಯ ಮಾಡಬೇಡಿ’ ಎಂದು ವಿರೋಧ ಪಕ್ಷಗಳಿಗೆ ಸರ್ಕಾರದ ಸಮಾಲೋಚನಾ ಸಮಿತಿಯ ನೇತೃತ್ವ ವಹಿಸಿರುವ ಪರ್ವೇಜ್ ಹೇಳಿದರು ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
"ವಿರೋಧ ಪಕ್ಷಗಳು ಕನಿಷ್ಠ ನಮ್ಮ ಮಾತನ್ನೂ ಕೇಳಿಸಿಕೊಳ್ಳಲು ತಯಾರಿಲ್ಲ. ಫಜಲ್ ಉರ್ ರೆಹಮಾನ್ ಅವರ ಪ್ರಕಾರ ಸರ್ಕಾರದ ಜೊತೆಗೆ ಮಾತುಕತೆ ನಡೆಸುವುದು ಕಾಲಹರಣದ ಸಂಗತಿ. ಸರಿ ಹಾಗಿದ್ದರೆ, ಬನ್ನಿ ನಾವೂ ನಿಮ್ಮ ಜೊತೆಗೆ ಕಾಲಹರಣ ಮಾಡಲು ಬಯಸುತ್ತೇವೆ’ ಎಂದೂ ಪರ್ವೇಜ್ ಹೇಳಿದ್ದಾರೆ.
ಈ ನಡುವೆ 11 ಸುಗ್ರೀವಾಜ್ಞೆಗಳನ್ನು ಅಂಗೀಕರಿಸದ ಸರ್ಕಾರದ ಕ್ರಮಕ್ಕೆ ವಿರೋಧಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿದರು. ರೆಹಮಾನ್, ಪ್ರತಿಭಟನೆ ಮುಂದುವರಿಸುವುದಾಗಿ ತಿಳಿಸಿದರು.