ಜಮ್ಮು: ಪಾಕಿಸ್ತಾನದಲ್ಲಿ ಭಯೋತ್ಪಾದಕರಿಗೆ ಯಾವುದೇ ತೊಂದರೆಯಾಗಿಲ್ಲ. ಅಲ್ಲಿರುವ 160ಕ್ಕೂ ಹೆಚ್ಚು ಭಯೋತ್ಪಾದಕರು ಭಾರತದೊಳಗೆ ನುಸುಳಲು ಗಡಿಯಲ್ಲಿ ಹೊಂಚು ಹಾಕಿದ್ದಾರೆ ಎಂದುಲೆಪ್ಟಿನೆಂಟ್ ಜನರಲ್ ಪರಮಜಿತ್ ಸಿಂಗ್ ಹೇಳಿದ್ದಾರೆ.
ಭಾನುವಾರ ಇಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಪಾಕಿಸ್ತಾನದ ನೀತಿ ಹಾಗೂ ಉದ್ದೇಶಗಳಲ್ಲಿ ಬದಲಾವಣೆ ಆಗದ ಹೊರತು ಗಡಿಯಲ್ಲಿ ಭಯೋತ್ಪಾದನಾ ಚಟುವಟಿಕೆ ನಿಯಂತ್ರಣಕ್ಕೆ ಬರುವ ಸಾಧ್ಯತೆ ಇಲ್ಲ ಎಂದಿದ್ದಾರೆ.
ಪಾಕಿಸ್ತಾನದ ಭಯೋತ್ಪಾದನಾ ನೆಲೆಗಳ ಮೇಲೆ 2016ರಲ್ಲಿ ಕೈಗೊಂಡಿದ್ದ ನಿರ್ದಿಷ್ಟ ದಾಳಿಯ ಯೋಜನೆಯಲ್ಲಿ ಪಾಲ್ಗೊಂಡಿದ್ದ ಸಿಂಗ್ ಅವರು, ಸೇನೆ ಯಾವಾಗಲೂ ಸನ್ನದ್ಧವಾಗಿರುತ್ತದೆ ಹಾಗೂ ಒಳನುಸುಳುವಿಕೆ ತಡೆಯುವಷ್ಟು ಪ್ರಬಲವಾಗಿದೆ ಎಂದರು.
ಜಮ್ಮ ಮತ್ತು ಕಾಶ್ಮೀರದ ಮೂರು ವಲಯದಲ್ಲಿ 140ರಿಂದ 160 ಉಗ್ರರು ಒಳಗೆ ನುಸುಳಲು ಯತ್ನಿಸುತ್ತಿದ್ದಾರೆ. ಚಳಿಗಾಲದಲ್ಲಿ ಪಾಕಿಸ್ತಾನಿ ಪಡೆಗಳು ಭಾರಿ ಹಿಮಪಾತ ಬೀಳುವ ಪ್ರದೇಶಗಳ ಮೂಲಕ ಪ್ರವೇಶಿಸಲು ನುಸುಳುಕೋರರಿಗೆ ನೆರವು ನೀಡುತ್ತವೆ’ ಎಂದು ಹೇಳಿದರು.