ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಪುತ್ರ ವಿವೇಕ್ ಡೊಭಾಲ್ ಅವರು ‘ಕ್ಯಾರವಾನ್’ ನಿಯತಕಾಲಿಕೆ ವಿರುದ್ಧ ಹೂಡಿರುವ ಮಾನನಷ್ಟ ಮೊಕದ್ದಮೆ ಸಂಬಂಧ ಇಬ್ಬರು ಸಾಕ್ಷಿಗಳು ದೆಹಲಿ ಕೋರ್ಟ್ನಲ್ಲಿ ತಮ್ಮ ಹೇಳಿಕೆ ದಾಖಲಿಸಿದರು.
ವಿವೇಕ್ ಅವರ ಸ್ನೇಹಿತ ನಿಖಿಲ್ ಕಪೂರ್ ಮತ್ತು ಉದ್ಯಮ ಪಾಲುದಾರ ಅಮಿತ್ ಶರ್ಮಾ ಅವರು ಮೊಕದ್ದಮೆಯನ್ನು ಬೆಂಬಲಿಸಿ ಸೋಮವಾರ ಹೇಳಿಕೆ ನೀಡಿದರು.
ವರದಿ ಪ್ರಕಟವಾದ ಬಳಿಕ ಬಂಡವಾಳ ಹೂಡಿಕೆದಾರರಲ್ಲಿ ಗೊಂದಲ ಮೂಡಿದೆ ಎಂದು ಶರ್ಮಾ ಹೇಳಿದ್ದಾರೆ. ಸಹೋದರ ಶೌರ್ಯ ಅವರ ಉದ್ಯಮದ ಜೊತೆ ವಿವೇಕ್ ನಂಟು ಹೊಂದಿದ್ದಾರೆ ಎಂಬ ಆರೋಪವನ್ನೂ ಅವರು ಅಲ್ಲಗಳೆದಿದ್ದಾರೆ.
ವಿವೇಕ್ ಸಹಪಾಠಿಯೂ ಆಗಿರುವ ಪುಣೆ ಮೂಲದ ಉದ್ಯಮಿ ಕಪೂರ್, ‘ವರದಿಯಲ್ಲಿ ಪ್ರಕಟವಾದ ಅಂಶಗಳಿಗೆ ಯಾವುದೇ ಅರ್ಥವಿಲ್ಲ, ಅದು ಕಾಪಿ ಪೇಸ್ಟ್ ಲೇಖನ’ ಎಂದು ಆರೋಪಿಸಿದ್ದಾರೆ.
ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ನ್ಯಾಯಾಧೀಶ ಸಮರ್ ವಿಶಾಲ್ ಅವರು ವಿಚಾರಣೆಯನ್ನು ಫೆ.22ಕ್ಕೆ ಮುಂದೂಡಿದರು.
ಜನವರಿ 30ರಂದು ತಮ್ಮ ಹೇಳಿಕೆ ದಾಖಲಿಸಿದ್ದ ವಿವೇಕ್ ಡೊಭಾಲ್ ಅವರು, ಕ್ಯಾರವಾನ್ ತಮ್ಮ ವಿರುದ್ಧ ಮಾಡಿದ್ದ ಎಲ್ಲ ಆರೋಪಗಳನ್ನು ಅಲ್ಲಗಳೆದಿದ್ದರು. ವರದಿಯನ್ನು ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್ ಅವರು ಉಲ್ಲೇಖಿಸಿದ್ದರಿಂದ ತಮ್ಮ ಘನತೆಗೆ ಚ್ಯುತಿಯಾಗಿದೆ ಎಂದು ವಿವೇಕ್ ಹೇಳಿದ್ದರು.
ತೆರಿಗೆ ಸ್ವರ್ಗವೆಂದು ಪರಿಗಣಿಸಲಾಗಿರುವ ಕೇಮನ್ ದ್ವೀಪದಲ್ಲಿ ವಿವೇಕ್ ಡೊಭಾಲ್ ಹೆಡ್ಜ್ ಫಂಡ್ ನಿರ್ವಹಿಸುತ್ತಿರುವ ಬಗ್ಗೆ ಜನವರಿ 16ರಂದು ‘ದಿ ಡಿ ಕಂಪನೀಸ್’ ಲೇಖನದಲ್ಲಿ ಕ್ಯಾರವಾನ್ ಉಲ್ಲೇಖಿಸಿತ್ತು.