ಲಖನೌ:ಪಶ್ಚಿಮ ಬಂಗಾಳದ ಪುರೂಲಿಯಾದಲ್ಲಿ ಮಂಗಳವಾರ ನಡೆದ ಬಿಜೆಪಿ ರ್ಯಾಲಿಯಲ್ಲಿ ಭಾಗವಹಿಸಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ರಸ್ತೆ ಮೂಲಕ ಪ್ರಯಾಣ ಬೆಳೆಸಿದರು.
ಭಾನುವಾರ ಬಂಗಾಳದ ರಾಯ್ಗಂಜ್ ಮತ್ತು ಬಲೂರ್ಘಾಟ್ಗಳಲ್ಲಿ ನಡೆದ ರ್ಯಾಲಿಗಳನ್ನು ಉದ್ದೇಶಿಸಿ ಯೋಗಿ ಅವರು ಮಾತನಾಡಬೇಕಿತ್ತು. ಆದರೆ ಬಂಗಾಳದಲ್ಲಿ ಅವರ ಹೆಲಿಕಾಪ್ಟರ್ ಇಳಿಯಲು ಅಲ್ಲಿನ ಸರ್ಕಾರ ಅನುಮತಿ ನಿರಾಕರಿಸಿತು. ಹೀಗಾಗಿ ಯೋಗಿ ಅವರು ಫೋನಿನ ಮೂಲಕ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದರು.
ಹೀಗಾಗಿ ಮಂಗಳವಾರ ಪಶ್ಚಿಮ ಬಂಗಾಳದ ಪುರೂಲಿಯಾ ರ್ಯಾಲಿಯಲ್ಲಿ ಭಾಗವಹಿಸಲು ಅವರು ರಸ್ತೆ ಮೂಲಕ ಪ್ರಯಾಣ ಮಾಡಿದರು.
ಲಖನೌನಿಂದ ಜಾರ್ಖಂಡ್ ರಾಜಧಾನಿ ರಾಂಚಿಗೆ ವಿಮಾನದ ಮೂಲಕ ಅವರು ತೆರಳಿದರು. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಬೊಕಾರೊ ತಲುಪಿದರು. ಅಲ್ಲಿಂದ 50 ಕಿ.ಮೀ. ದೂರದಲ್ಲಿರುವ ಪುರೂಲಿಯಾಗೆ ಅವರು ವಾಹನದಲ್ಲಿ ತೆರಳಿದರು ಎಂದು ಮೂಲಗಳು ತಿಳಿಸಿವೆ.