ಧನ್ಬಾದ್ : ಮಾಜಿ ಸಂಸದ ಹಾಗೂ ಜಾರ್ಖಂಡ್ನ ಪ್ರಾದೇಶಿಕ ಪಕ್ಷ ಮಾರ್ಕ್ಸಿಸ್ಟ್ ಕೊಆರ್ಡಿನೇಷನ್ ಕಮಿಟಿ(ಎಂಸಿಸಿ)ಯ ಸ್ಥಾಪಕ ಎ.ಕೆ. ರಾಯ್ (90) ಭಾನುವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಎಡಪಂಥದ ಹಿರಿಯ ನಾಯಕರು ಮತ್ತು ಜಾರ್ಖಂಡ್ನ ರಾಜ್ಯ ಸಿಐಟಿಯು ಪೋಷಕರಾಗಿದ್ದ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು.
ಅವರು ಜಾರ್ಖಂಡ್ ಚಳವಳಿಯ ಸ್ಥಾಪಕರೂ ಆಗಿದ್ದರು. 1977,1980 ಮತ್ತು 1989ರಲ್ಲಿ ಧನ್ಬಾದ್ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಅವರ ಬ್ಯಾಂಕ್ ಖಾತೆ ಸದಾ ಶೂನ್ಯವಾಗಿರುತ್ತಿದ್ದರಿಂದ ಅವರನ್ನು ರಾಜಕೀಯ ಸಂತ ಎಂದೇ ಕರೆಯಲಾಗುತ್ತಿತ್ತು.
ಜಾರ್ಖಂಡ್ ರಾಜ್ಯ ಸ್ಥಾಪಿಸುವಂತೆ ಆಗ್ರಹಿಸುತ್ತಿದ್ದ ಅವರು ಜಾರ್ಖಂಡ್ ಮುಕ್ತಿಮೋರ್ಚಾದ ಮುಖಂಡ ಶಿಬು ಸೊರೇನ್ ಮತ್ತು ಮಾಜಿ ಸಂಸದ ಬಿನೋದ್ ಬಿಹಾರಿ ಮಹತೋ ಅವರೊಡನೆ ಸೇರಿ ಜಾರ್ಖಂಡ್ ಚಳವಳಿಯನ್ನು 1971ರಲ್ಲೇ ಆರಂಭಿಸಿದ್ದರು. 2000ನೇ ಇಸವಿಯ ನವೆಂಬರ್ 15ರಂದು ಜಾರ್ಖಂಡ್ ಪ್ರತ್ಯೇಕ ರಾಜ್ಯವಾಯಿತು.