ಕೋಲ್ಕತ್ತ: ದೇಶದಲ್ಲಿರುವ ಎಲ್ಲ ವಲಸಿಗರಿಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಅಡಿಯಲ್ಲಿ ಪೌರತ್ವ ದೊರಕಿಸಿಕೊಡಲಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಭಾನುವಾರ ಹೇಳಿದರು.
ಶಾಹಿದ್ ಮಿನಾರ್ ಮೈದಾನದಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ಟಿಎಂಸಿ ಸೇರಿದಂತೆ ವಿರೋಧ ಪಕ್ಷಗಳು ವಲಸಿಗರು ಹಾಗೂ ಅಲ್ಪಸಂಖ್ಯಾತರಲ್ಲಿ ಹಾದಿ ತಪ್ಪಿಸುತ್ತಿದೆ ಮತ್ತು ಅವರಲ್ಲಿ ಹೆದರಿಕೆ ಹುಟ್ಟಿಸುತ್ತಿವೆ’ ಎಂದು ಆರೋಪಿಸಿದರು.
‘ಸಿಎಎ ಪೌರತ್ವ ನೀಡುತ್ತದೆಯೆ ಹೊರತು ಕಸಿದುಕೊಳ್ಳುವುದಿಲ್ಲ ಎಂದು ಅಲ್ಪಸಂಖ್ಯಾತ ಸಮುದಾಯದ ಪ್ರತಿಯೊಬ್ಬರಿಗೂ ನಾನು ಭರವಸೆ ನೀಡುತ್ತೇನೆ’ ಎಂದರು.
ಚುನಾವಣೆಗೆ ಪೂರ್ವಸಿದ್ಧತೆ: ‘ಪಶ್ಚಿಮ ಬಂಗಾಳದಲ್ಲಿ 2021ರ ವಿಧಾನಸಭಾ ಚುನಾವಣೆ ಬಳಿಕ ಬಹುಮತದೊಂದಿಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.