ಮುಂಬೈ: ಅಂಗನವಾಡಿ ಕಾರ್ಯಕರ್ತೆಯ ಪುತ್ರ ರವಿಕರಣ್ ಪರಮೇಶ್ವರ್ ಎಂಬ ಕಲಾವಿದ ರಚಿಸಿದ ಮಹಾತ್ಮ ಗಾಂಧಿಯವರ ಎರಡು ಕಲಾಕೃತಿಗಳು ಗುಜರಾತ್ ದಂಡಿಯ ರಾಷ್ಟ್ರೀಯ ಉಪ್ಪಿನ ಸತ್ಯಾಗ್ರಹ ಸ್ಮಾರಕ ಮತ್ತು ವಸ್ತು ಸಂಗ್ರಹಾಲಯದಲ್ಲಿ ಸ್ಥಾನ ಪಡೆದುಕೊಂಡಿವೆ.
ಮಹಾತ್ಮ ಗಾಂಧಿಯವರ 71ನೇ ಪುಣ್ಯ ಸ್ಮರಣಾರ್ಥ ಇಲ್ಲಿ ವಸ್ತುಸಂಗ್ರಹಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ದೇಶಕ್ಕೆ ಸಮರ್ಪಿಸಿದರು.
ದಂಡಿ ಉಪ್ಪಿನ ಸತ್ಯಾಗ್ರಹದ ಸ್ಮಾರಕದಲ್ಲಿರುವ 80 ಸತ್ಯಾಗ್ರಹಿಗಳ ವಿಗ್ರಹಗಳಿಂದ ವಿನ್ಯಾಸಗೊಳಿಸಲಾಗಿದೆ. ಇವುಗಳಲ್ಲಿ ಒಂದು ವಿಗ್ರಹವನ್ನು ತಯಾರಿಸಿದವರು ರವಿಕಿರಣ್. ರವಿಕಿರಣ್ ಅಮ್ಮ ನವಿಮುಂಬೈನ ಅರೋಳಿಯ ಅಂಗನವಾಡಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅರೋಳಿಯ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ರವಿಕಿರಣ್, ನಂತರ ಫೈನ್ಆರ್ಟ್ ವಿಷಯದಲ್ಲಿ ಪದವೀಧರರಾದರು. ಸದ್ಯ ಗೋವಾದಲ್ಲಿ ನೆಲೆಸಿದ್ದಾರೆ.
‘ನನ್ನ ಕಲಾಕೃತಿಗಳು ಸ್ಮಾರಕದ ವಸ್ತುಸಂಗ್ರಹಾಲಯದ ಭಾಗವಾಗಿರುವುದು ಹೆಮ್ಮೆಯ ಸಂಗತಿ’ ಕಲಾವಿದ ಪರಮೇಶ್ವರ್ ತಿಳಿಸಿದ್ದಾರೆ.
ಮಹಾತ್ಮಾ ಗಾಂಧಿಯವರ 8x5 ಅಡಿ ಎತ್ತರದ ವರ್ಣಚಿತ್ರ '241 ಗ್ಯಾಲರಿಯಲ್ಲಿ' ಸೇರಿದೆ ಹಾಗೂ ಕೈಯಲ್ಲಿ ಉಪ್ಪು ಹಿಡಿದು ನಿಂತಿರುವ ಮಹಾತ್ಮಾ ಗಾಂಧಿ ಅವರ 25x15 ಅಡಿ ಎತ್ತರದ ಮ್ಯೂರಲ್ ಚಿತ್ರ ಸೈಫಿ ವಿಲ್ಲಾ ಸಮೀಪವಿರುವ ಗೋಡೆಯ ಮೇಲೆ ಇರಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.