ನರಗುಂದ: ಮಹದಾಯಿ ಹೋರಾಟಕ್ಕೆ ಎಲ್ಲ ರಾಜಕೀಯ ಪಕ್ಷಗಳು ಅಡ್ಡಗಾಲು ಹಾಕುವ ಮೂಲಕ ರೈತರನ್ನು ವಂಚಿಸಿವೆ. ಮೂರು ವರ್ಷದ ಹೋರಾವನ್ನು ರಾಜಕೀಯ ಸ್ವಅರ್ಥಕ್ಕೆ ಬಳಸಿಕೊಂಡಿವೆ ಹರತು ರೈತರಿಗೆ ಏನೂ ಮಾಡಲಿಲ್ಲ. ಮಹದಾಯಿ ಅನುಷ್ಠಾನಗೊಳಿಸುವಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆ ಕಾರಣ ಎಂದು ಮಹದಾಯಿ ಹೋರಾಟ ಸಮಿತಿ ಸದಸ್ಯ ವೀರಣ್ಣ ಸೊಪ್ಪಿನ ಆರೋಪಿಸಿದರು.ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 1006ನೇ ದಿನವಾದ ಸೋಮವಾರ ಅವರು ಮಾತನಾಡಿದರು.
ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥ ರಾಜಕೀಯಕ್ಕೆ ಮಹದಾಯಿ ಯೋಜನೆಯನ್ನು ಬಲಿಪಶು ಕೊಡುವ ಲಕ್ಷಣಗಳು ತೋರುತ್ತಿವೆ. ಇದಕ್ಕೆ ಉತ್ತರ ಕರ್ನಾಟಕದ ರೈತರ ಸಹನೆ ಕಟ್ಟೆ ಒಡೆಯುತ್ತಿದೆ. ಈಗಾಗಲೇ ಎಲ್ಲ ರೀತಿಯ ಹೋರಾಟ ನಡೆದಿದೆ. ಕಾವೇರಿಗಿರುವ ಆಸಕ್ತಿ ಮಹದಾಯಿಗೆ ತೋರುತ್ತಿಲ್ಲ ಎಂದು ಅವರು ಟೀಕಿಸಿದರು.
ಎಲ್ಲರೂ ಒಂದೊಂದು ರೀತಿಯಲ್ಲಿ ವರಸೆ ಬದಲಿಸುತ್ತಿದ್ದಾರೆ. ಯಾವ ಪಕ್ಷಕ್ಕೂ ಮಹದಾಯಿ ಆಗುವುದು ಬೇಕಿಲ್ಲ. ಇದಕ್ಕೆ ನಾವು ಜಗ್ಗುವುದಿಲ್ಲ. ಮಹದಾಯಿ ನೀರು ಹರಿಯುವವರೆಗೂ ನಾವು ಹೋರಾಟದಿಂದ ಕದಲುವುದಿಲ್ಲ ಎಂದರು.
ಸದಸ್ಯ ವಾಸು ಚವ್ಹಾಣ ಮಾತನಾಡಿ ವಿಧಾನಸಭೆ ಚುನಾವಣೆ ಕಣ ರಂಗೇರುತ್ತಿದೆ. ರೈತರು ಜಾಗೃತಗೊಂಡು ಮತ ಚಲಾಯಿಸಿ. ರೈತ ಪರ ಸರ್ಕಾರಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ವೆಂಕಪ್ಪ ಹುಜರತ್ತಿ, ಹನಮಂತ ಪಡೆಸೂರ, ಯಲ್ಲಪ್ಪ ಗುಡದರಿ, ವೀರಬಸಪ್ಪ ಹೂಗಾರ, ಶ್ರೀಶೈಲ ಮೇಟಿ,ಅರ್ಜುನ ಮಾನೆ ಹಾಗೂ ಹೋರಾಟ ಸಮಿತಿ ಸದಸ್ಯರು ಧರಣಿಯಲ್ಲಿ ಪಾಲ್ಗೊಂಡಿದ್ದರು.