ಶಿಮ್ಲಾ: ಹಿಮಾಚಲಪ್ರದೇಶದ ಮಂಡಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇದೇ 10ರಂದು ನಡೆಸಿದ್ದ ರ್ಯಾಲಿಯಲ್ಲಿ ಪಾಲ್ಗೊಳ್ಳದ ಸ್ಥಳೀಯ ಶಾಸಕ ಅನಿಲ್ ಶರ್ಮಾ ವಿರುದ್ಧ ಬಿಜೆಪಿ ಶೀಘ್ರವೇ ಕ್ರಮ ಜರುಗಿಸಲಿದೆ.
ಅನಿಲ್ ಅವರ ಮಗ ಆಶ್ರಯ್ ಅವರು ಈ ಮಂಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ.ಇದೇ ಕಾರಣದಿಂದ ಅನಿಲ್ ಗೈರುಹಾಜರಾಗಿದ್ದರು.
ಪಕ್ಷದ ಹೈಕಮಾಂಡ್ ಜೊತೆಗೆ ಚರ್ಚಿಸಿದ ಬಳಿಕ ಖಂಡಿತವಾಗಿ ಅನಿಲ್ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸತ್ಪಾಲ್ ಸಿಂಗ್ ಸತ್ತಿ ತಿಳಿಸಿದರು.
ಅವರ ವಿಧಾನಸಭಾ ಸದಸ್ಯತ್ವ ಕುರಿತು ಕಾನೂನು ಸಲಹೆ ಪಡೆದು ಸ್ಪೀಕರ್ ಅವರ ಮೂಲಕ ಕ್ರಮ ಜರುಗಿಸಲಾಗುವುದು. ಶಾಸಕಾಂಗ ಪಕ್ಷದ ನಾಯಕನಾಗಿ ಮುಖ್ಯಮಂತ್ರಿ ಜೈರಾಂ ಠಾಕೂರ್ ಅವರು ಶಿಸ್ತುಕ್ರಮದ ಸ್ವರೂಪವನ್ನು ನಿರ್ಧರಿಸಲಿದ್ದಾರೆ ಎಂದು ಸತ್ತಿ ತಿಳಿಸಿದರು.