ಕಾಡಿನ ಹಾಡಿಯ ಹಾದಿಯಲ್ಲಿ ನಡೆಯುವಾಗಲೆಲ್ಲ ಆಗತಾನೆ ಮೊಳಕೆ ಒಡೆದ ಹೂ ಗಿಡ, ಗೆಡ್ಡೆಗಳ ಮೊಗ್ಗಿನ ಚಿಗುರಿನ ಪರಿಮಳ ಮನಸೂರೆಗೊಳ್ಳುತ್ತದೆ. ಅಂತೆಯೇ, ಮಳೆಯ ಕಾರಣ ಬೆಳೆದುನಿಂತಿರುವ ಬಣ್ಣದ ಅಣಬೆಗಳ ಮಾಯಾಲೋಕ ಸಹೃದಯಿಗಳನ್ನು ಬೇರೊಂದು ಪ್ರಪಂಚಕ್ಕೆ ಕರೆದೊಯ್ಯುತ್ತದೆ. ಸವಿಯಲು ರುಚಿಯಾದ ಕಲ್ಲಣಬೆ, ಹೊಯಿಗೆ ಅಣಬೆಗಳ ರಾಶಿ ಸೂಜಿಗಲ್ಲಿನಂತೆ ಸೆಳೆಯುತ್ತವೆ. ಈ ಬಾರಿ ಮುಂಗಾರು ಪೂರ್ವ ಮಳೆ ಅತಿಯಾಗಿ ಬಂದಿದ್ದರಿಂದ ಕಲ್ಲಣಬೆ ಸಹಿತ ಇನ್ನಿತರ ಅಣಬೆಗಳು ಮೊಳಕೆ ಒಡೆದು ಅಷ್ಟೇ ಬೇಗ ಹಾಳಾಗಿವೆ. ಕಳೆದ ವರ್ಷದಷ್ಟು ಕಲ್ಲಣಬೆಗಳು ಅಣಬೆಪ್ರಿಯರ ಬಾಯಿ ಸೇರಿಲ್ಲ ಎಂಬುದೇ ದುಃಖದ ಸಂಗತಿ.