ನವದೆಹಲಿ:ಅರುಣಾಚಲ ಪ್ರದೇಶ ರಾಜ್ಯ ರಚನೆಯಾದ ದಿನದ ಕಾರ್ಯಕ್ರಮದಲ್ಲಿ ಗೃಹ ಸಚಿವ ಅಮಿತ್ ಶಾ ಪಾಲ್ಗೊಳ್ಳುವುದಕ್ಕೆ ಚೀನಾ ತಕರಾರು ಎತ್ತಿದೆ. ಅರುಣಾಚಲ ಪ್ರದೇಶ ದಕ್ಷಿಣ ಟಿಬೆಟ್ನ ಭಾಗ ಎಂದು ಚೀನಾ ವಾದಿಸುತ್ತಿದ್ದೆ. ಹಾಗಾಗಿ ಗೃಹ ಸಚಿವರು ಬೀಜಿಂಗ್ನ ಪ್ರಾದೇಶಿಕ ಸಾರ್ವಭೌಮತ್ವ ಮತ್ತು ರಾಜಕೀಯವಾಗಿರುವ ಪರಸ್ಪರ ನಂಬಿಕೆಯನ್ನು ಹಾಳು ಮಾಡಿದ್ದಾರೆ ಎಂದು ಚೀನಾ ಹೇಳಿದೆ.
ಅರುಣಾಚಲ ಪ್ರದೇಶದ 34ನೇ ರಾಜ್ಯ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಶಾ, ಕೈಗಾರಿಕೆ ಮತ್ತು ರಸ್ತೆ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈಶಾನ್ಯ ರಾಜ್ಯಗಳಿಗೆ ಭಾರತೀಯ ನಾಯಕರು ಭೇಟಿ ನೀಡುವುದನ್ನು ಚೀನಾ ವಿರೋಧಿಸುತ್ತಲೇ ಬಂದಿದೆ. ಚೀನಾ-ಭಾರತ ಗಡಿಯ ಪೂರ್ವ ವಲಯದಲ್ಲಿ ಅಥವಾ ಚೀನಾದ ಟಿಬೆಟ್ ಪ್ರದೇಶದ ದಕ್ಷಿಣ ಭಾಗದಲ್ಲಿ ಚೀನಾದ ನಿಲುವು ಸ್ಥಿರ ಮತ್ತು ಸ್ಪಷ್ಟವಾಗಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೆನ್ ಶುವಾಂಗ್ ಹೇಳಿದ್ದಾರೆ.
ಚೀನಾ ಸರ್ಕಾರವು ಅರುಣಾಚಲ ಪ್ರದೇಶ ಎಂದು ಕರೆಯುವ ಭಾಗವನ್ನು ಯಾವತ್ತೂ ಅಂಗೀಕರಿಸಿಲ್ಲ ಮತ್ತು ಚೀನಾದ ಟಿಬೆಟ್ ಪ್ರದೇಶದ ದಕ್ಷಿಣ ಭಾಗಕ್ಕೆ ಭಾರತದ ಯಾವುದೇ ರಾಜಕಾರಣಿ ಬರುವುದನ್ನು ನಾವು ವಿರೋಧಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಅದೇ ವೇಳೆ ಗಡಿ ಸಮಸ್ಯೆ ಉಲ್ಬಣವಾಗುವಂತೆ ಮಾಡುವ ಯಾವುದೇ ಕಾರ್ಯವನ್ನು ಕೈಗೊಳ್ಳಬೇಡಿ ಎಂದು ಭಾರತಕ್ಕೆ ಮನವಿ ಮಾಡಿದ ಚೀನಾ ಗಡಿಭಾಗದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡಿ ಎಂದಿದೆ.