ನವದೆಹಲಿ: ಪೊಲೀಸ್ ಮಹಾನಿರ್ದೇಶಕರ ನೇಮಕಾತಿಯಲ್ಲಿ ರಾಜ್ಯ ಸರ್ಕಾರಗಳ ನಿರ್ಧಾರವೇ ಅಂತಿಮ ಎನ್ನುವ ಪ್ರತಿಪಾದನೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಪೊಲೀಸ್ ಇಲಾಖೆಯ ವಿಷಯ ರಾಜ್ಯಗಳಿಗೆ ಸಂಬಂಧಿಸಿದ್ದು. ಹೀಗಾಗಿ, ಈ ಬಗ್ಗೆ ರಾಜ್ಯ ಸರ್ಕಾರಗಳೇ ನಿರ್ಧಾರಕೈಗೊಳ್ಳಲು ಅವಕಾಶ ನೀಡಬೇಕು ಎಂದು ನ್ಯಾಯಾಲಯದಲ್ಲಿ ವಾದ ಮಂಡಿಸಲಾಗಿತ್ತು.
ಹಾಲಿ ಡಿಜಿಪಿ ನಿವೃತ್ತರಾಗುವ ಮೂರು ತಿಂಗಳ ಮುನ್ನವೇ ಹೊಸ ಡಿಜಿಪಿಗೆ ಸಂಬಂಧಿಸಿದ ಎಲ್ಲ ಪ್ರಸ್ತಾವಗಳನ್ನು ಕೇಂದ್ರೀಯ ಲೋಕಸೇವಾ ಆಯೋಗಕ್ಕೆ ಕನಿಷ್ಠ ಮೂರು ತಿಂಗಳ ಮುನ್ನವೇ ಕಳುಹಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಈ ಬಗ್ಗೆ ಯುಪಿಎಸ್ಸಿ ಸಮಿತಿಯನ್ನು ರಚಿಸಿ ರಾಜ್ಯಗಳಿಗೆ ಮಾಹಿತಿ ನೀಡಬೇಕು. ರಾಜ್ಯ ಸರ್ಕಾರಗಳು ತಕ್ಷಣವೇ ಒಬ್ಬರನ್ನು ಸಮಿತಿಗೆ ನೇಮಿಸಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.
ಡಿಜಿಪಿ ನೇಮಕದ ಕುರಿತು ಕಳೆದ ವರ್ಷ ನೀಡಿದ್ದ ಆದೇಶವನ್ನು ಬದಲಾಯಿಸುವಂತೆ ಪಂಜಾಬ್, ಕೇರಳ, ಪಶ್ಚಿಮ ಬಂಗಾಳ ರಾಜ್ಯಗಳು ಕೋರಿದ್ದ ಮನವಿಯನ್ನು ಸಹ ನ್ಯಾಯಾಲಯ ನಿರಾಕರಿಸಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠವು ಈ ಆದೇಶ ನೀಡಿದೆ.