ತಿರುವನಂತಪುರ:ಶಬರಿಮಲೆಗೆ ಭಕ್ತರ ಭೇಟಿಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಕೇರಳ ಪೊಲೀಸರು ಡಿಜಟಲ್ ಗುಂಪು ನಿರ್ವಹಣಾ ವ್ಯವಸ್ಥೆಯನ್ನು (ಡಿಜಿಟಲ್ ಕ್ರೌಡ್ ಮ್ಯಾನೇಜ್ಮೆಂಟ್ ಸಿಸ್ಟಂ– ಡಿಸಿಎಂಎಸ್) ಜಾರಿಗೊಳಿಸಲು ನಿರ್ಧರಿಸಿದ್ದಾರೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಈ ವ್ಯವಸ್ಥೆ ಜಾರಿಯಾದ ನಂತರ ಭಕ್ತರು ಶಬರಿಮಲೆ ದೇಗುಲಕ್ಕೆ ಭೇಟಿ ನೀಡಲು ಇಚ್ಛಿಸುವ ದಿನಾಂಕ ಮತ್ತು ಸಮಯವನ್ನು ಮೊದಲೇ ಆಯ್ಕೆಮಾಡಿಕೊಳ್ಳಬಹುದಾಗಿದೆ. ಬುಕಿಂಗ್ಗಳನ್ನು ದೇಗುಲದ ವೆಬ್ಸೈಟ್sabarimala.com ಮೂಲಕ ನಿರ್ವಹಿಸಬಹುದಾಗಿದೆ.
ಆನ್ಲೈನ್ನಲ್ಲಿಯೇ ಭಕ್ತರು ದರ್ಶನದ ವೇಳೆಯನ್ನು ನಿಗದಿಪಡಿಸಿಕೊಳ್ಳಬಹುದು. ನಿಲಕ್ಕಲ್ನಿಂದ ಪಂಬಾವರೆಗೆ ಬಸ್ ಟಿಕೆಟ್ ಸಹ ಬುಕ್ ಮಾಡಿಕೊಳ್ಳಬಹುದು. ಹೀಗೆ ಬುಕ್ ಮಾಡಿಕೊಂಡ ಟಿಕೆಟ್ಗೆ 48 ಗಂಟೆಗಳ ವ್ಯಾಲಿಡಿಟಿ ಇರುತ್ತದೆ.
ಎಲ್ಲ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿ ಸುಪ್ರೀಂಕೋರ್ಟ್ ಆದೇಶ ನೀಡಿದ ನಂತರ ಶಬರಿಮಲೆ ಸುದ್ದಿಯಲ್ಲಿದೆ. ಈವರೆಗೆ 3505 ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳದ ವಿವಿಧೆಡೆ ಒಟ್ಟು 529 ಪ್ರಕರಣಗಳನ್ನು ದಾಖಲಿಸಲಾಗಿದೆ.