ನವದೆಹಲಿ: ಇ–ಸಿಗರೇಟ್ ಉತ್ಪಾದನೆ, ಆಮದು ಹಾಗೂ ಮಾರಾಟ ನಿಷೇಧಿಸುವ ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
‘ಮಕ್ಕಳು ಮತ್ತು ಯುವಕರ ಆರೋಗ್ಯದ ದೃಷ್ಟಿಯಿಂದ ಇದನ್ನುನಿಷೇಧಿಸುತ್ತಿದ್ದೇವೆ’ ಎಂದುಇ–ಸಿಗರೇಟ್ಗೆ ಸಂಬಂಧಿಸಿದ ಸಚಿವರ ಗುಂಪಿನ (ಜಿಒಎಂ) ನೇತೃತ್ವ ವಹಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದರು.
ಇ–ಸಿಗರೇಟ್ ಮತ್ತು ವೇಪಿಂಗ್ ಉತ್ಪನ್ನಗಳನ್ನು ದೇಶದಲ್ಲಿ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಕರ್ನಾಟಕ ವರ್ಜೀನಿಯಾ ತಂಬಾಕು ಬೆಳೆಗಾರರ ಸಂಘ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮಂಗಳವಾರ ಮನವಿ ಮಾಡಿತ್ತು.
ಈ ಕುರಿತು ಸಚಿವರಿಗೆ ಪತ್ರ ಬರೆದಿರುವ ಸಂಘವು, ‘ಭಾರತದಲ್ಲಿ ಇ–ಸಿಗರೇಟ್ ವ್ಯಾಪಾರ ಬೆಳೆಯಲು ಪ್ರೋತ್ಸಾಹ ನೀಡುವುದು ದೇಶದ ತಂಬಾಕು ಬೆಳೆಗಾರರ ಮೇಲೆ ಗದಾಪ್ರಹಾರ ಮಾಡಿದಂತಾಗುತ್ತದೆ’ ಎಂದಿದೆ.
‘ಈ ಉತ್ಪನ್ನಗಳನ್ನು ನಿಷೇಧಿಸಿದರೆ ರೈತರಿಗೆ ನಷ್ಟವಾಗುತ್ತದೆ ಎಂದು ವ್ಯವಸ್ಥಿತವಾಗಿ ಅಪಪ್ರಚಾರ ಮಾಡಲಾಗುತ್ತದೆ. ಇದು ಸಂಪೂರ್ಣ ತಪ್ಪು. ಬಹುರಾಷ್ಟ್ರೀಯ ಕಂಪನಿಗಳ ಲಾಭಕ್ಕಾಗಿ ಕೆಲಸ ಮಾಡುತ್ತಿರುವ ಕೆಲವೇ ಜನರ ಗುಂಪಿನ ಮನವಿ ಸ್ವೀಕರಿಸಬಾರದು’ ಎಂದೂ ಸಂಘವು ಮನವಿ ಮಾಡಿತ್ತು.