ನವದೆಹಲಿ:ದೆಹಲಿಯ ತುಘಲಕಾಬಾದ್ ಪ್ರದೇಶದಲ್ಲಿರುವ ಕೊಳೆಗೇರಿಯೊಂದರಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು, 200ಕ್ಕೂ ಹೆಚ್ಚು ಗುಡಿಸಲುಗಳು ಭಸ್ಮವಾಗಿದೆ.
ಬುಧವಾರಮಧ್ಯರಾತ್ರಿ ಈ ದುರ್ಘಟನೆ ನಡೆದಿದ್ದು, ನೂರಾರು ಜನರು ಆಶ್ರಯ ಕಳೆದುಕೊಂಡಿದ್ದಾರೆ. ಆದಾಗ್ಯೂ ಯಾರೊಬ್ಬರೂ ಗಾಯಗೊಂಡಿಲ್ಲ ಎಂದು ವರದಿಯಾಗಿದೆ.
ಬೆಂಕಿ ಕಾಣಿಸಿಕೊಂಡ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಕಾರ್ಯಾಚರಣೆ ಮುಂದುವರಿಸಿವೆ.
ಈ ಬಗ್ಗೆ ಮಾತನಾಡಿರುವ ವಿಭಾಗೀಯ ಅಗ್ನಿಶಾಮಕ ಅಧಿಕಾರಿ ಎಸ್ಕೆ ದುವಾ, ‘ಮಧ್ಯರಾತ್ರಿ 1.31ಕ್ಕೆ ಈ ಸಂಬಂಧ ಒಂದು ಕರೆ ಬಂತು. ಕೂಡಲೇ 20 ಅಗ್ನಿಶಾಮಕ ವಾಹನಗಳನ್ನು ಕಳುಹಿಸಿಕೊಡಲಾಯಿತು. 3 ಗಂಟೆ ಸುಮಾರಿಗೆ ಬೆಂಕಿ ನಿಯಂತ್ರಣಕ್ಕೆ ತರಲಾಯಿತು’ ಎಂದು ಮಾಹಿತಿ ನೀಡಿದ್ದಾರೆ.
ಈ ಮೊದಲು ಮೇ 26 ರಂದು ಸಿಲಿಂಡರ್ ಸ್ಫೋಟಗೊಂಡು ಇದೇ ಪ್ರದೇಶದಲ್ಲಿ ನೂರಾರು ಗುಡಿಸಲುಗಳು ಸುಟ್ಟುಹೋಗಿದ್ದವು.