ನವದಹಲಿ: ಕಡಿಮೆ ಹಣ ಖರ್ಚು ಮಾಡಿ ಅತ್ಯಂತ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದರು.
ನಗರದಲ್ಲಿ ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆ(ಸಿಎಸ್ಐಆರ್) ಆಯೋಜಿಸಿದ್ದ ‘ಪಾದಾಚಾರಿಗಳು ಮತ್ತು ಗಣನಾ ವಿಧಾನಗಳು’ ಅಂತರರಾಷ್ಟ್ರೀಯ ಸಮಾವೇಶವೊಂದರಲ್ಲಿ ವಿಡಿಯೊ ಸಂದೇಶದ ಮೂಲಕ ಅವರು ಮಾತನಾಡಿದರು.
ಈ ವೇಳೆ, ‘ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ’ ಎಂದ ಗಡ್ಕರಿ, ಅದಕ್ಕಾಗಿ ಹೊಸ ತಂತ್ರಜ್ಞಾನವನ್ನು ಕಂಡುಕೊಳ್ಳುವಂತೆ ತಜ್ಞರಿಗೆ ಕರೆ ನೀಡಿದರು.
ಸ್ಥಳೀಯವಾಗಿ ಲಭ್ಯವಿರುವ ಕಚ್ಚಾಸಾಮಗ್ರಿಗಳನ್ನು, ತ್ಯಾಜ್ಯ ವಸ್ತುಗಳನ್ನು ಬಳಸಿಕೊಳ್ಳಲು ಸಾಧ್ಯವಿರುವ ತಂತ್ರಜ್ಞಾನಕ್ಕೆ ಉತ್ತೇಜನ ನೀಡಬೇಕು. ತಂತ್ರಜ್ಞಾನವು, ಗುಣಮಟ್ಟದೊಡನೆ ಯಾವುದೇ ರಾಜಿ ಮಾಡಿಕೊಳ್ಳದೆ ಕಡಿಮೆ ಸಮಯ ಹಾಗೂ ಕಡಿಮೆ ವೆಚ್ಚದಲ್ಲಿಯೋಜನೆಗಳನ್ನು ಪೂರ್ಣಗೊಳಿಸುವಂತಿರಬೇಕು ಎಂದು ತಿಳಿಸಿದರು.
ಎರಡು ದಿನಗಳ ಕಾಲ ನಡೆಯುವ ಸಮಾವೇಶವು ಶುಕ್ರವಾರ ಆರಂಭವಾಗಿದ್ದು, ಪಾದಚಾರಿ ಮಾರ್ಗಗಳ ನಿರ್ಮಾಣ,ವಿನ್ಯಾಸಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ತಜ್ಞರುಸಮಾವೇಶದಲ್ಲಿಚರ್ಚಿಸಲಿದ್ದಾರೆ.