ಐಜ್ವಾಲ್: ಸ್ವಗ್ರಾಮದಲ್ಲೇ ಅಂತ್ಯಕ್ರಿಯೆ ನಡೆಸಬೇಕೆಂಬಬಯಕೆಯಿಂದ ಗೆಳೆಯನ ಮೃತದೇಹದ ಜೊತೆಗೆ ಯುವಕನೊಬ್ಬ 3 ಸಾವಿರ ಕಿ.ಮೀ. ಪ್ರಯಾಣ ಬೆಳೆಸಿರುವ ಹೃದಯಸ್ಪರ್ಶಿ ಸನ್ನಿವೇಶ ನಡೆದಿದೆ.
ಮೀಜೊರಾಂ ನಿವಾಸಿ ವಿವಿಯನ್ ಲಾಲ್ರೆಮ್ಸಂಗಾ ಹೃದಯಾಘಾತದಿಂದ ಏಪ್ರಿಲ್ 23 ರಂದು ಚೆನ್ನೈನಲ್ಲಿ ಮೃತರಾಗಿದ್ದರು. ಅವರ ಅಂತ್ಯಕ್ರಿಯೆಯನ್ನು ಸ್ಥಳೀಯ ಸ್ಮಶಾನದಲ್ಲಿ ಮಾಡುವಂತೆ ಅಧಿಕಾರಿಗಳು ತಿಳಿಸಿದರು. ಆದರೆ, ಸ್ನೇಹಿತ ರಾಫೆಲ್ ಎವಿಎಲ್ ಮಲ್ಚ್ಚಾನ್ಹಿಮಾ (23) ಇದಕ್ಕೆ ಒಪ್ಪಲಿಲ್ಲ.
ಗೆಳೆಯನ ಅಂತ್ಯಕ್ರಿಯೆ ಆತನ ಸ್ವಗ್ರಾಮದಲ್ಲಿಯೇ ಆಗಬೇಕು ಎಂಬುದು ಅವರ ಬಯಕೆಯಾಗಿತ್ತು. ಹೀಗಾಗಿ ಲಾಕ್ಡೌನ್ ನಡುವೆಯೂ 3 ಸಾವಿರ ಕಿ.ಮೀ. ದೂರದ ಮಿಜೋರಾಂಗೆ ಮೃತದೇಹವನ್ನು ತೆಗೆದುಕೊಂಡು ಹೋಗಲು ನಿರ್ಧರಿಸಿದರು.
ಅವರ ಈ ಸಾಹಸಕ್ಕೆ ಮಿಜೋರಾಂ ಸರ್ಕಾರ ಮತ್ತು ಚೆನ್ನೈನಲ್ಲಿರುವ ಮಿಜೋ ಕಲ್ಯಾಣ ಇಲಾಖೆ ಸಹಕಾರ ನೀಡಿದವು. ಇಬ್ಬರು ಚಾಲಕರೊಂದಿಗೆ ಆಂಬುಲೆನ್ಸ್ನಲ್ಲಿ ರಾಫೆಲ್ ಹೊರಟರು. ವಿವಿಧ ರಾಜ್ಯಗಳಲ್ಲಿ ಪ್ರಯಾಣಿಸಲು ಅಗತ್ಯವಾದ ಪಾಸ್ಗಳನ್ನು ಅವರು ಪಡೆದಿದ್ದರು.
‘ಸ್ನೇಹಿತನ ಅಂತ್ಯಕ್ರಿಯೆಯನ್ನು ದೂರದ ಊರಿನಲ್ಲಿ ಮಾಡಲು ಮನಸು ಒಪ್ಪಲಿಲ್ಲ. ಹಾಗಾಗಿ ಈ ನಿರ್ಧಾರ ತೆಗೆದುಕೊಂಡೆ. ಗೆಳೆಯನ ಸಾವಿನ ದುಃಖದೊಂದಿಗೆ ನಾಲ್ಕು ದಿನಗಳ ಪಯಣ ಮಾಡುವುದು ಅಸಹನೀಯವಾಗಿತ್ತು’ ಎಂದುರಾಫೆಲ್ ತಿಳಿಸಿದ್ದಾರೆ.ರಾಫೆಲ್ ಅವರನ್ನು ಹದಿನಾಲ್ಕು ದಿನ ಕ್ವಾರಂಟೈನ್ ಮಾಡಲಾಗಿದೆ.