ಚೆನ್ನೈ: ನಟ ರಜನೀಕಾಂತ್ ಅವರು ತಾನು ರಾಜಕೀಯ ಪ್ರವೇಶಿಸಲು ಸ್ಥಾಪಿಸಿದ್ದ ‘ರಜನಿ ಮಕ್ಕಳ್ ಮಂದ್ರಮ್’ನ (ಆರ್ಎಂಎಂ) ಪದಾಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಪದಾಧಿಕಾರಿಗಳ ಜೊತೆಗೆ ಗುರುವಾರ ನಡೆದ ಚರ್ಚೆಯಲ್ಲಿ ವಿಷಯವೊಂದರ ಕುರಿತು ನಾನು ‘ನಿರಾಶೆ’ಗೊಂಡಿದ್ದೇನೆ ಎಂದು ರಜನೀಕಾಂತ್ ತಿಳಿಸಿದರು. ಆದರೆ ಯಾವ ವಿಷಯದ ಕುರಿತು ನಿರಾಶೆಗೊಂಡಿದ್ದಾರೆ ಎನ್ನುವುದನ್ನು ವಿವರಿಸಲು ಅವರು ನಿರಾಕರಿಸಿದರು.
‘ಪಕ್ಷವನ್ನು ಯಾವಾಗ ಘೋಷಿಸಬೇಕು ಮುಂತಾದ ವಿಷಯಗಳ ಕುರಿತು ಚರ್ಚಿಸಲೆಂದೇ ವರ್ಷದ ಬಳಿಕ ಆರ್ಎಂಎಂನ ಜಿಲ್ಲಾ ಘಟಕದ ಕಾರ್ಯದರ್ಶಿಗಳ ಜತೆ ಸಭೆ ನಡೆಸಿದ್ದೆ. ಸಭೆಯಲ್ಲಿ ಬಹಳಷ್ಟು ಪ್ರಶ್ನೆಗಳು ಬಂದವು. ಇವುಗಳೆಲ್ಲವನ್ನೂ ಉತ್ತರಿಸಿದ್ದೇನೆ. ಹಲವು ವಿಷಯಗಳ ಕುರಿತು ಅಭಿಪ್ರಾಯ ಹಂಚಿಕೆಯಾದವು. ಆದರೆ ಒಂದು ವಿಷಯದಲ್ಲಿ ನಾನು ನಿರಾಶೆಗೊಂಡೆ. ಇದನ್ನು ಬಹಿರಂಗಪಡಿಸಲು ಇಚ್ಚಿಸುವುದಿಲ್ಲ. ಸಮಯ ಬಂದಾಗ ಬಹಿರಂಗಪಡಿಸುವೆ’ ಎಂದರು.
ಧಾರ್ಮಿಕ ನಾಯಕರು ಚರ್ಚೆ ನಡೆಸಲಿ:‘ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಪಿಆರ್) ಕುರಿತು ಇರುವ ಆತಂಕದ ಬಗ್ಗೆ ಧಾರ್ಮಿಕ ನಾಯಕರು ಚರ್ಚೆ ನಡೆಸಬೇಕೇ ಹೊರತು ‘ರಾಜಕಾರಣಿಗಳಲ್ಲ’. ಕೇಂದ್ರ ಸರ್ಕಾರದ ಜೊತೆ ಚರ್ಚೆ ನಡೆಸಲು ನನ್ನನ್ನು ಭೇಟಿಯಾದಮುಸ್ಲಿಂ ಧಾರ್ಮಿಕ ನಾಯಕರ ನಿಯೋಗಕ್ಕೆ ಸಲಹೆ ನೀಡಿದ್ದೇನೆ. ಇವರ ಪ್ರಯತ್ನಕ್ಕೆ ನನ್ನ ಬೆಂಬಲವಿದೆ’ ಎಂದರು.
ನಟ, ರಾಜಕಾರಣಿ ಕಮಲ್ ಹಾಸನ್ ಅವರೊಂದಿಗೆ ಕೈಜೋಡಿಸುವ ಕುರಿತ ಪ್ರಶ್ನೆಗೆ ಉತ್ತರಿಸಿದ ರಜನೀಕಾಂತ್, ‘ಸಮಯವೇ ಈ ಕುರಿತು ಉತ್ತರ ನೀಡಲಿದೆ’ ಎಂದರು.