ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಹೊಸದಾಗಿ ಆಯ್ಕೆಯಾದ ಇತರ ಶಾಸಕರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.
ಸೋಮವಾರದಿಂದ ದೆಹಲಿ ವಿಧಾನಸಭೆಯ ಅಧಿವೇಶನ ಆರಂಭವಾಗಿದ್ದು, ಆಮ್ ಆದ್ಮಿ ಪಕ್ಷದ ಸರ್ಕಾರ ಮೂರನೇ ಬಾರಿ ಅಧಿಕಾರಕ್ಕೆ ಬಂದ ಮೇಲೆ ಇದು ಮೊದಲ ಅಧಿವೇಶನವಾಗಿದೆ.
ಪರಿಸರ ಸಚಿವ ಗೋಪಾಲ್ ರೈ ಮತ್ತು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಕೂಡ ಪ್ರಮಾಣ ವಚನ ಸ್ವೀಕರಿಸಿದರು.
ಗ್ರೇಟರ್ ಕೈಲಾಶ್ ಕ್ಷೇತ್ರದ ಶಾಸಕ ಸೌರಭ್ ಭಾರದ್ವಾಜ್ ‘ಬಜರಂಗ್ ಬಲಿ ಹನುಮಾನ್’ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನಂತರ ‘ಜೈ ಹನುಮಾನ್’ ಎಂದು ಘೋಷಣೆ ಸಹ ಕೂಗಿದರು. ಸಾಂಪ್ರದಾಯಿಕ ಉಡುಪು ಧರಿಸಿದ್ದ ಬುರಾರಿ ಕ್ಷೇತ್ರದ ಶಾಸಕ ಸಂಜೀವ್ ಝಾ ಮೈಥಿಲಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಹಂಗಾಮಿ ಸ್ಪೀಕರ್ ಆಗಿದ್ದ ಮಟೀಯಾ ಮಹಲ್ ಕ್ಷೇತ್ರದ ಶಾಸಕ ಶೋಯೆಬ್ ಇಕ್ಬಾಲ್, ವಿರೋಧಪಕ್ಷದ ನಾಯಕರಾಗಿ ಸೋಮವಾರ ಆಯ್ಕೆಯಾದ ಬದರ್ಪುರ್ ಕ್ಷೇತ್ರದ ಶಾಸಕ ರಾಮ್ವೀರ್ ಸಿಂಗ್ ಬಿಧುರಿ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಬಿಧುರಿ ಅವರು ಇಕ್ಬಾಲ್ ಅವರನ್ನು ಬಿಗಿದಪ್ಪಿಕೊಂಡರು.
ಇಬ್ಬರೂ 1993ರಲ್ಲಿ ದೆಹಲಿ ವಿಧಾನಸಭೆಗೆ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.