ನವದಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಸ್ತಿ ಮೌಲ್ಯ ಐದು ವರ್ಷದಲ್ಲಿ ₹1.3 ಕೋಟಿ ಹೆಚ್ಚಾಗಿದೆ.
ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಆಸ್ತಿ ಘೋಷಿಸಿ ಪ್ರಮಾಣ ಪತ್ರ ಸಲ್ಲಿಸಿದ ಅವರು, ತಮ್ಮ ಒಟ್ಟು ಆಸ್ತಿ ಮೌಲ್ಯ ₹3.4 ಕೋಟಿ ಎಂದು ಹೇಳಿದ್ದಾರೆ. 2015ರ ಚುನಾವಣೆ ವೇಳೆ ಕೇಜ್ರಿವಾಲ್ ಅವರ ಆಸ್ತಿ ₹2.1 ಕೋಟಿ ಇತ್ತು.
ಸುನೀತಾ ಕೇಜ್ರಿವಾಲ್ ಅವರ ಹಣ ಹಾಗೂ ಸ್ಥಿರ ಠೇವಣಿ ಐದು ವರ್ಷಗಳಲ್ಲಿ ₹15 ಲಕ್ಷದಿಂದ ₹57 ಲಕ್ಷಕ್ಕೆ ಏರಿಕೆಯಾಗಿದೆ. ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸುನೀತಾ ಅವರು 2016ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದರು. ಆಗ ₹32 ಲಕ್ಷ ಮೌಲ್ಯದಷ್ಟುಪಿಂಚಣಿ ಹಣ ದೊರೆತಿದೆ. ಬಾಕಿಯ ಹಣಉಳಿತಾಯದ್ದಾಗಿ ಎಂದು ಪಕ್ಷ ಹೇಳಿದೆ.
ಕೇಜ್ರಿವಾಲ್ ಅವರ ಹಣ ಮತ್ತು ಸ್ಥಿರ ಠೇವಣಿ 2015ರಲ್ಲಿ ₹ 2.26 ಲಕ್ಷವಿದ್ದು, ಈಗ ₹ 9.65 ಲಕ್ಷಕ್ಕೆ ಏರಿಕೆಯಾಗಿದೆ. ಸ್ಥಿರ ಆಸ್ತಿ ₹ 92 ಲಕ್ಷದಿಂದ ₹ 1.77 ಕೋಟಿಗೆ ಹೆಚ್ಚಾಗಿದೆ. ಕೇಜ್ರಿವಾಲ್ ಚರಾಸ್ತಿ ಮೌಲ್ಯವು ಮಾರುಕಟ್ಟೆಯಲ್ಲಿ ಏರಿಕೆಯಾಗಿರುವುದರಿಂದ ಆಸ್ತಿ ಏರಿಕೆಯಾಗಿದೆ ಎಂದು ಪಕ್ಷ ತಿಳಿಸಿದೆ.ಇನ್ನು ಪತ್ನಿ ಸುನೀತಾ ಅವರ ಸ್ಥಿರ ಆಸ್ತಿಮೌಲ್ಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ನಾಮಪತ್ರ ಸಲ್ಲಿಸಲು 6 ತಾಸು ಕಾದ ಕೇಜ್ರಿವಾಲ್
ಸತತ ಆರು ಗಂಟೆ ಕಾದ ನಂತರ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಚುನಾವಣೆಗೆ ನಾಮಪತ್ರ ಸಲ್ಲಿಸಲು ಸಾಧ್ಯವಾಯಿತು. ಸೋಮವಾರವೇ ಅವರು ನಾಮಪತ್ರ ಸಲ್ಲಿಸಬೇಕಿತ್ತು. ಆದರೆ, ಅವರ ಚುನಾವಣಾ ರ್ಯಾಲಿಯಿಂದಾಗಿ ಅದು ಸಾಧ್ಯವಾಗಿರಲಿಲ್ಲ.
ನಾಮಪತ್ರ ಸಲ್ಲಿಕೆಗೆ ಮಂಗಳವಾರವೇ ಕೊನೆಯ ದಿವಾಗಿತ್ತು. ಹೀಗಾಗಿ ಅರವಿಂದ್ ಕೇಜ್ರಿವಾಲ್ ಆರು ತಾಸು ಕಾಲ ಕಚೇರಿಯಲ್ಲಿ ಕಾದು ನಾಮಪತ್ರ ಸಲ್ಲಿಸಬೇಕಾಯಿತು.
Waiting to file my nomination. My token no is 45. There are many people here to file nomination papers. Am so glad so many people participating in democracy.
— Arvind Kejriwal (@ArvindKejriwal) January 21, 2020
ಚುನಾವಣಾಕಚೇಯಲ್ಲಿ ನಾಮಪತ್ರ ಸಲ್ಲಿಸುವಾಗಲೇ ಟ್ವೀಟ್ ಮಾಡಿದ್ದ ಅವರು, ‘ನನ್ನ ಟೋಕನ್ ಸಂಖ್ಯೆ 45 ಆಗಿದೆ. ಅನೇಕರು ಚುನಾವಣೆಗೆ ನಾಮಪತ್ರ ಸಲ್ಲಿಸುತ್ತಿದ್ದಾರೆ. ಪ್ರಜಾಪ್ರಭುತ್ವದ ಹಬ್ಬದಲ್ಲಿ ಇಷ್ಟೊಂದು ಮಂದಿ ಭಾಗಿಯಾಗಿರುವುದು ಸಂತಸ ತಂದಿದೆ’ ಎಂದು ಬರೆದುಕೊಂಡಿದ್ದಾರೆ.
ಕೇಜ್ರಿವಾಲ್ ಅವರು ನಾಮಪತ್ರ ಸಲ್ಲಿಕೆಗೆ ಕಾಯುವಂತೆ ಆಗಿದ್ದರ ಬಗ್ಗೆ ಎಎಪಿ ಅಸಮಾಧಾನ ವ್ಯಕ್ತಪಡಿಸಿದ್ದು, ‘ನಾಮಪತ್ರ ಸಲ್ಲಿಸಲು ಸಾಧ್ಯವಾಗಬಾರದು ಎಂದು ಉದ್ದೇಶಪೂರ್ವಕವಾಗಿ ಹೀಗೆ ಮಾಡಲಾಗಿದೆ’ ಎಂದು ಆರೋಪಿಸಿತ್ತು.
Doesn’t matter. Many of them r filing for the first time. They r bound to make mistakes. We also made mistakes the first time. We shud hand hold them. I am enjoying waiting wid them. They r all part of my family. https://t.co/9s8hRDnjSU
— Arvind Kejriwal (@ArvindKejriwal) January 21, 2020
ಈ ಆರೋಪವನ್ನು ತಳ್ಳಿಹಾಕಿರುವ ದೆಹಲಿ ಸಿಇಒ ಕಚೇರಿ, ‘ನಾಮಪತ್ರ ಸ್ವೀಕೃತಿಗೆ ಇರುವ ನಿಯಮವನ್ನು ನಾವು ಪಾಲಿಸಿದ್ದೇವೆಯೇ ಹೊರತು ಉದ್ದೇಶಪೂರ್ವಕವಾಗಿ ವಿಳಂಬವಾಗಿಲ್ಲ. ಕೊನೆಯ ದಿನ ಆಗಿದ್ದರಿಂದ ಸಾಕಷ್ಟು ಮಂದಿ ನಾಮಪತ್ರ ಸಲ್ಲಿಕೆಗೆ ಬಂದಿದ್ದರು. ಇದರಿಂದ ತಡವಾಗಿದೆ’ ಎಂದು ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.