ಗುವಾಹಟಿ: ಮೇಘಾಲಯದ ಪೂರ್ವ ಜೈಂತಿಯಾ ಜಿಲ್ಲೆಯ ಲುಮ್ತರಿ ಗ್ರಾಮದ ಬಳಿಯ ಕಲ್ಲಿದ್ದಲು ಗಣಿಯೊಂದರಲ್ಲಿ ಸಿಲುಕಿಕೊಂಡಿರುವ 13 ಕಾರ್ಮಿಕರ ರಕ್ಷಣೆಗಾಗಿ ಶನಿವಾರವೂ ಕಾರ್ಯಾಚರಣೆ ಮುಂದುವರಿದಿದೆ.
ಗಣಿಯ ಸುರಂಗದೊಳಗೆ ಕಾರ್ಮಿಕರು ಗುರುವಾರ ತೆರಳಿದ್ದ ವೇಳೆ ಪ್ರವಾಹದ ನೀರು ಅದರೊಳಗೆ ತುಂಬಿಕೊಂಡು ಅವರು ಒಳಗಡೆ ಸಿಲುಕಿಕೊಂಡಿದ್ದರು.
ನದಿಯ ಪಕ್ಕದಲ್ಲಿರುವ ಈ ಗಣಿಯನ್ನು ಈ ಹಿಂದೆ ಮುಚ್ಚಲಾಗಿತ್ತು. ಕೇವಲ ನಾಲ್ಕು ದಿವಸಗಳ ಹಿಂದಷ್ಟೆ ಮತ್ತೆ ಗಣಿಗಾರಿಕೆ ಆರಂಭಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಣಿಯ ಸುರಂಗದೊಳಗಿನ ನೀರನ್ನು ಪಂಪ್ಗಳ ಮೂಲಕ ಹೊರತೆಗೆಯುವ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಣಿಯೊಳಗೆ ಸಿಲುಕಿಕೊಂಡಿರುವ 13 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಆದರೆ ಅಧಿಕಾರಿಗಳು ಅದನ್ನು ದೃಢಪಡಿಸಿಲ್ಲ.
ಒಬ್ಬನ ಒಂಧನ: ಈ ಸಂಬಂಧ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.