ನವದೆಹಲಿ: ಪ್ರಧಾನಿನರೇಂದ್ರ ಮೋದಿ ಅವರು ಉಪಗ್ರಹವನ್ನು ಹೊಡೆದುರುಳಿಸುವ ಉಪಗ್ರಹ ನಿರೋಧಕ ಕ್ಷಿಪಣಿಯಪರೀಕ್ಷೆ ಕುರಿತು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿರುವುದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ವಿರೋಧ ಪಕ್ಷಗಳು ಚುನಾವಣಾ ಆಯೋಗ ರಚಿಸಿರುವ ಕಣ್ಗಾವಲು ಸಮಿತಿಗೆ ದೂರು ನೀಡಿವೆ.
ದೂರನ್ನು ಗಂಭೀರವಾಗಿ ಪರಿಗಣಿಸಿದ ಚುನಾವಣಾ ಆಯೋಗ ತಕ್ಷಣವೇ ಈ ಬಗ್ಗೆಪರಿಶೀಲನೆ ನಡೆಸಬೇಕೆಂದು ಆಯೋಗದ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಆಯೋಗದ ವಕ್ತಾರ ಶೈಪಾಲಿ ಶರಣ್, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕುರಿತು ತಕ್ಷಣವೇ ತನಿಖೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಚುನಾವಣಾ ಆಯೋಗವು ನಿರ್ದೇಶಿಸಿರುವ ಬಗ್ಗೆಟ್ವೀಟ್ ಮಾಡಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ಉಪಗ್ರಹವನ್ನು ಹೊಡೆದುರುಳಿಸುವ ಉಪಗ್ರಹ ನಿರೋಧಕ ಕ್ಷಿಪಣಿಯಪರೀಕ್ಷೆ ನಡೆದಿರುವ ಕುರಿತು ರಕ್ಷಣಾ ಸಚಿವಾಲಯದ ವಿಜ್ಞಾನಿಗಳು ಘೋಷಿಸಬೇಕೇ ಹೊರತು ಮೋದಿಯಲ್ಲ’ ಎಂದು ಹರಿಹಾಯ್ದಿದ್ದಾರೆ.
ಇನ್ನು ಕಮ್ಯೂನಿಷ್ಟ್ ಪಾರ್ಟಿ ಆಫ್ ಇಂಡಿಯಾ ಪಕ್ಷವೂ, ಇದೊಂದು ನೀತಿ ಸಂಹಿತೆಯ ಉಲ್ಲಂಘನೆ ಎಂದು ಆಯೋಗಕ್ಕೆ ಪತ್ರ ಬರೆದಿದೆ.
ನರೇಂದ್ರ ಮೋದಿ ಅವರು ದೇಶದ ಭದ್ರತೆಗೆ ಸಂಬಂಧಿಸಿದಂತೆ ಮಾತನಾಡಿರುವ ಕಾರಣ ನೀತಿ ಸಂಹಿತೆ ಉಲ್ಲಂಘನೆಯಾಗುವುದಿಲ್ಲ ಎಂದು ಆಯೋಗದ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.