ಮುಂಬೈ: ಕೋವಿಡ್–19 ಪಿಡುಗು ತಾಂಡವವಾಡುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷ ಗಣೇಶೋತ್ಸವವನ್ನು ಯಾವ ರೀತಿ ಆಯೋಜನೆ ಮಾಡಬಹುದು ಎಂಬುದನ್ನು ಚರ್ಚಿಸಲು ಪೊಲೀಸ್ ಕಮಿಷನರ್ ಪರಮ್ ವೀರ್ ಸಿಂಗ್ ಅವರು ನಗರದ ಗಣೇಶ ಮಂಡಳಗಳ ಜೊತೆ ಸಭೆ ನಡೆಸಿದರು.
ಮುಂಬೈನಲ್ಲಿ ಸಾವಿರಾರು ಗಣೇಶ ಮಂಡಳಗಳು ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತವೆ. ಈ ಬಾರಿ 10 ದಿನಗಳ ಉತ್ಸವ ಆಗಸ್ಟ್ 22 ರಂದು ಆರಂಭವಾಗಲಿದೆ.
ಆಯುಕ್ತರ ಕಚೇರಿಯಲ್ಲಿ ಮಂಗಳವಾರ ಸಭೆ ನಡೆಯಿತು. ಮಹಾರಾಷ್ಟ್ರ ಸರ್ಕಾರದ ಎಲ್ಲ ಆದೇಶಗಳನ್ನು ಪಾಲಿಸುವುದಾಗಿ ಮಂಡಳಗಳ ಮುಖ್ಯಸ್ಥರು ಭರವಸೆ ನೀಡಿದರು.
ಸರ್ಕಾರ ಸೂಚನೆ ನೀಡಿದರೆ ಈ ವರ್ಷ ಗಣೇಶೋತ್ಸವವನ್ನು ಆಚರಿಸುವುದಿಲ್ಲ. ಸದ್ಯ ತಲೆದೋರಿರುವ ಪರಿಸ್ಥಿತಿಯಲ್ಲಿ ಸಾರ್ವಜನಿಕ ಸ್ವಾಸ್ಥ್ಯ ಮುಖ್ಯ ಎಂದು ಗಣೇಶ ಗಲ್ಲಿ ಮಂಡಳ ಕಾರ್ಯದರ್ಶಿ ಸ್ವಪ್ನಿಲ್ ಪರಬ್ ತಿಳಿಸಿದರು.
ಮುಂದೂಡಿಕೆ: ಸಾರ್ವಜನಿಕ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಡಾಲಾದಲ್ಲಿ ಜಿಎಸ್ಬಿ ಗಣೇಶೋತ್ಸವ ಸಮಿತಿ ಗಣೇಶ ಉತ್ಸವವನ್ನು ಫೆಬ್ರುವರಿಗೆ ಮುಂದೂಡಿದೆ ಎಂದು ಟ್ರಸ್ಟಿ ಮುಕುಂದ ಕಾಮತ್ ತಿಳಿಸಿದ್ದಾರೆ. ವಡಾಲಾ ಮಠದಲ್ಲಿ 10 ದಿನಗಳ ಕಾಲ ನಡೆಯುವ ಉತ್ಸವಕ್ಕೆ ಸಾವಿರಾರು ಮಂದಿ ದರ್ಶನ ಪಡೆಯುತ್ತಾರೆ.