ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸ್ಮರಣಾರ್ಥ₹100 ಮುಖಬೆಲೆಯ ನಾಣ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಬಿಡುಗಡೆ ಮಾಡಿದ್ದಾರೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ , ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತು ರಾಜ್ಯ ಸಚಿವ ಮಹೇಶ್ ಶರ್ಮಾ ಅವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಡಿ.25ಕ್ಕೆ ವಾಜಪೇಯಿ ಅವರ ಹುಟ್ಟುಹಬ್ಬ ಆಚರಣೆ ನಡೆಯಲಿದ್ದು, ಈ ದಿನವನ್ನು ಉತ್ತಮ ಆಡಳಿತ ದಿನವಾಗಿ ಆಚರಿಸಲಾಗುತ್ತಿದೆ.
ಹೀಗಿದೆ ನಾಣ್ಯ
ಈ ನಾಣ್ಯವನ್ನು ಬೆಳ್ಳಿ, ಕಂಚು, ನಿಕಲ್ ಮತ್ತು ಸತು (ಝಿಂಕ್) ನಿಂದ ತಯಾರಿಸಲಾಗಿದೆ.ಇದರ ತೂಕ35 ಗ್ರಾಂ. ಈ ನಾಣ್ಯದಲ್ಲಿ ಅಶೋಕ ಸ್ತಂಭದ ಮತ್ತು ಮಧ್ಯದಲ್ಲಿ ದೇವನಾಗರಿ ಲಿಪಿಯಲ್ಲಿ ಸತ್ಯಮೇವ ಜಯತೇ ಎಂದು ಬರೆಯಲಾಗಿದೆ. ಎಡಭಾಗದಲ್ಲಿ ಭಾರತ್ ಎಂದು ಬರೆದಿದ್ದು, ಬಲಭಾಗದಲ್ಲಿ ಇಂಗ್ಲಿಷ್ನಲ್ಲಿ ಇಂಡಿಯಾ ಎಂದು ಬರೆಯಲಾಗಿದೆ.
PM @narendramodi releases commemorative coin in honour of Bharat Ratna Shri Atal Bihari Vajpayee
— PIB India (@PIB_India) December 24, 2018
▶️https://t.co/CDjpxqJsZz pic.twitter.com/O1dr2thYcw
ಅಟಲ್ ಜೀ ಅವರು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟವರು.ಅವರು ಜನ ಸಂಘ ಕಟ್ಟಿದವರು.ನಮ್ಮ ಪ್ರಜಾಪ್ರಭುತ್ವವನ್ನು ಉಳಿಸಬೇಕಾಗಿ ಬಂದ ಸಂದರ್ಭದಲ್ಲಿ ಅವರು ಜನತಾ ಪಾರ್ಟಿ ಸೇರಿದರು.ಅದೇ ರೀತಿ ಅಧಿಕಾರದಲ್ಲಿ ಉಳಿಯುವುದೋ ಅಥವಾ ಸಿದ್ಧಾಂತಗಳಿಗೆ ಬದ್ಧವಾಗಿರುವುದೋ ಎಂಬ ಆಯ್ಕೆ ಬಂದಾಗ ಅವರು ಜನತಾ ಪಾರ್ಟಿಯನ್ನು ಬಿಟ್ಟು ಬಿಜೆಪಿ ರೂಪಿಸಿದರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಕೆಲವರಿಗೆ ಅಧಿಕಾರ ಎಂಬುದು ಆಮ್ಲಜನಕದಂತೆ. ಅದು ಇಲ್ಲದೆ ಬದುಕಲು ಆಗುವುದಿಲ್ಲ. ವಾಜಪೇಯಿ ಅವರು ಅವರ ವೃತ್ತಿ ಜೀವನದ ಬಹುಭಾಗವನ್ನು ವಿಪಕ್ಷ ಸೀಟಿನಲ್ಲಿ ಕುಳಿತು ದೇಶದ ಹಿತಾಸಕ್ತಿಗಾಗಿ ದನಿಯೆತ್ತಿದವರು. ಅವರೆಂದಿಗೂ ತಮ್ಮಪಕ್ಷದ ಸಿದ್ಧಾಂತಗಳನ್ನು ಬಿಟ್ಟು ಕೊಟ್ಟಿಲ್ಲ. ಅವರು ನಮ್ಮ ಪಕ್ಷವನ್ನು ಬಹುದೊಡ್ಡ ಪಕ್ಷವನ್ನಾಗಿಸಲು ಶ್ರಮಿಸಿದವರು.
ಅವರು ಮಾತನಾಡಿದರೆ ದೇಶ ಮಾತನಾಡುತ್ತಿತ್ತು. ಅವರು ದೇಶವನ್ನುದ್ದೇಶಿಸಿ ಮಾತನಾಡಿದರೆ ದೇಶವೇ ಅದನ್ನುಆಲಿಸುತ್ತಿತ್ತು, ಅವರೀಗ ಇಲ್ಲ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ.ಅನಾರೋಗ್ಯ ಸಮಸ್ಯೆಯಿಂದಾಗಿ ಅವರು ಕೆಲವು ವರ್ಷಗಳ ಕಾಲ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಇದ್ದರೂ, ಅವರು ಇಹಲೋಕ ತ್ಯಜಿಸಿದಾಗ ಜನರು ಅವರಿಗೆ ಅರ್ಪಿಸಿದ ಶ್ರದ್ಧಾಂಜಲಿ ಅವರು ಜನರ ಮನಸ್ಸಲ್ಲಿ ಹೇಗೆ ನೆಲೆಸಿದ್ದರು ಎಂಬುದಕ್ಕೆ ಸಾಕ್ಷಿಯಾಗಿತ್ತು ಎಂದಿದ್ದಾರೆ ಮೋದಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.