ನವದೆಹಲಿ:ಸರ್ಕಾರಿ ಸ್ವಾಮ್ಯದ 41 ಶಸ್ತ್ರಾಸ್ತ್ರ ತಯಾರಿಕೆ ಕಾರ್ಖಾನೆಗಳಿಗೆ ಕಾರ್ಪೊರೇಟ್ ರೂಪ ನೀಡಲು ಹೊರಟಿರುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ, ಈ ಕಾರ್ಖಾನೆಗಳ ಸುಮಾರು 1.22 ಲಕ್ಷ ನೌಕರರು ಮುಷ್ಕರ ಆರಂಭಿಸಿದ್ದಾರೆ.
‘ಈ ಕಾರ್ಖಾನೆಗಳಿಗೆ ಕಾರ್ಪೊರೇಟ್ ರೂಪ ನೀಡುವ ಮೂಲಕ ಅವುಗಳನ್ನು ಖಾಸಗೀಕರಣ ಮಾಡಲು ಸರ್ಕಾರ ಹೊರಟಿದೆ. ಇದರಿಂದ ನೌಕರರ ಹಿತಾಸಕ್ತಿಗೆ ಮತ್ತು ಕಾರ್ಖಾನೆಗಳ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಲಿದೆ. ಹೀಗಾಗಿ ಇದನ್ನು ವಿರೋಧಿಸುತ್ತಿದ್ದೇವೆ.ಮಂಗಳವಾರದಿಂದ ಆರಂಭವಾಗಿರುವ ಮುಷ್ಕರವು ಇನ್ನೂ ಒಂದು ತಿಂಗಳು ನಡೆಯಲಿದೆ. ಮಂಗಳವಾರದ ಮುಷ್ಕರದಿಂದ 41 ಕಾರ್ಖಾನೆಗಳಲ್ಲೂ ಉತ್ಪಾದನೆ ಸಂಪೂರ್ಣ ಸ್ಥಗಿತಗೊಂಡಿದೆ’ ಎಂದು ಮುಷ್ಕರ ನಿರತ ನೌಕರರು ಹೇಳಿದ್ದಾರೆ.
‘ನರೇಂದ್ರ ಮೋದಿ ಅವರು ರಾಷ್ಟ್ರೀಯತೆಯ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದಿದ್ದಾರೆ. ಆದರೆ ರಾಷ್ಟ್ರೀಯ ಭದ್ರತೆಯಲ್ಲಿ ಮಹತ್ವದ ಪಾತ್ರವಹಿಸುವ ಈ ಕಾರ್ಖಾನೆಗಳನ್ನು ಕಾರ್ಪೊರೇಟ್ ಸಂಸ್ಥೆಗಳು ಮತ್ತು ವಿದೇಶಿ ಕಂಪನಿಗಳ ಮುಲಾಜಿಗೆ ಬಿಡುತ್ತಿದ್ದಾರೆ. ಇದಕ್ಕಿಂತ ವಿಪರ್ಯಾಸ ಬೇರೊಂದಿಲ್ಲ’ ಎಂದು ನೌಕರರು ಆರೋಪಿಸಿದ್ದಾರೆ.
‘ಆರ್ಡನನ್ಸ್ ಫ್ಯಾಕ್ಟರಿ ಬೋರ್ಡ್’ ಅಡಿಯಲ್ಲಿ ಈ 41 ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತವೆ. ಈ ಸಂಸ್ಥೆಗಳಲ್ಲಿ 82,000 ಕಾಯಂ ನೌಕರರು ಮತ್ತು 40,000 ಗುತ್ತಿಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ.