ಚೆನ್ನೈ: ಬಿಜೆಪಿ ವಿರೋಧಿ ಪಕ್ಷಗಳು ಮಾಡಿಕೊಳ್ಳುತ್ತಿರುವ ಮಹಾಮೈತ್ರಿ ‘ಅವಕಾಶವಾದಿತನ’. ದೇಶ ಸೇವೆಯಲ್ಲಿ ಆಸಕ್ತಿ ಇರುವ ಪಕ್ಷ ಬಿಜೆಪಿ ಮಾತ್ರ ಎಂದುಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.
ನಮೋ ಆ್ಯಪ್ ಮೂಲಕ ತಮಿಳುನಾಡಿನ ಬಿಜೆಪಿ ಕಾರ್ಯಕರ್ತರ ಜತೆಗೆ ಮೋದಿ ಅವರು ಸಂವಾದ ನಡೆಸಿದರು. ವಿರೋಧ ಪಕ್ಷಗಳು ತಮ್ಮದೇ ಸಾಮ್ರಾಜ್ಯ ಸೃಷ್ಟಿಸಲು ಮಾತ್ರ ಆಸಕ್ತಿ ಹೊಂದಿವೆ ಎಂದು ಆಪಾದಿಸಿದರು.
‘ಅವರಿಗೆ ತಮ್ಮ ಸಾಮ್ರಾಜ್ಯ ಕಟ್ಟುವಲ್ಲಿ ಮಾತ್ರ ಆಸಕ್ತಿ. ನಾವು ಜನರನ್ನು ಸಬಲಗೊಳಿಸಲು ಬಯಸುತ್ತೇವೆ. ಮೈತ್ರಿಕೂಟವು ಅಲ್ಪಾವಧಿಯ ವ್ಯವಸ್ಥೆಯಾಗಿದ್ದು, ಆಯಾ ಪಕ್ಷಗಳ ಪ್ರಯೋಜನಕ್ಕಾಗಿ ಮಾತ್ರ ಇದೆ’ ಎಂದು ಮೋದಿ ಹರಿಹಾಯ್ದರು.
ಬೇರೆ ಪಕ್ಷಗಳ ರೀತಿಯಲ್ಲಿ ಬಿಜೆಪಿ ವಿಭಜಿಸಿ ಆಳುವ ರಾಜಕಾರಣ ಮಾಡುವುದಿಲ್ಲ. ನಮ್ಮ ಅಭಿವೃದ್ಧಿ ಕಾರ್ಯಸೂಚಿಯನ್ನು ಇನ್ನಷ್ಟು ಮುಂದಕ್ಕೆ ಒಯ್ಯಲು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ಅಗತ್ಯ ಎಂದು ಅವರು ಪ್ರತಿಪಾದಿಸಿದರು.