ನವದೆಹಲಿ: ಬಳ್ಳಾರಿ ಪ್ರವೇಶಿಸಲು ಅನುಮತಿ ಕೋರಿ ಗಣಿ ಉದ್ಯಮಿ ಜನಾರ್ದನ ರೆಡ್ಡಿ ಅವರು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಿಚಾರಣೆ ನಡೆಸಲಿದೆ.
‘ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ಮಾವನನ್ನು ಬಳ್ಳಾರಿಯ ಆಸ್ಪತ್ರೆಯಲ್ಲಿ ಐಸಿಯುಗೆ ದಾಖಲಿಸಲಾಗಿದೆ. ಅವರನ್ನು ಭೇಟಿ ಮಾಡುವ ಸಲುವಾಗಿ ಬಳ್ಳಾರಿ ಪ್ರವೇಶಿಸಲು ಅನುಮತಿ ನೀಡಬೇಕು’ ಎಂದು ರೆಡ್ಡಿ ಅವರು ಗುರುವಾರ ಸಲ್ಲಿಸಿರುವ ಅರ್ಜಿಯಲ್ಲಿ ಕೋರಿದ್ದಾರೆ.
ಬಹುಕೋಟಿ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ರೆಡ್ಡಿ, 2015ರಿಂದ ಜಾಮೀನಿನ ಮೇಲೆ ಜೈಲಿನಿಂದ ಹೊರಗಿದ್ದಾರೆ.
ತಮ್ಮೂರು ಬಳ್ಳಾರಿ ಹಾಗೂ ಆಂಧ್ರಪ್ರದೇಶದ ಅನಂತಪುರ ಹಾಗೂ ಕಡಪ ಜಿಲ್ಲೆಗಳನ್ನು ಪ್ರವೇಶಿಸಬಾರದು ಎನ್ನುವುದು ಸೇರಿದಂತೆ ಕೆಲವು ಷರತ್ತುಗಳನ್ನು ಅವರಿಗೆ ವಿಧಿಸಲಾಗಿತ್ತು.
ಜನಾರ್ದನ ರೆಡ್ಡಿ ಹಾಗೂ ಓಬಳಾಪುರಂ ಗಣಿ ಕಂಪನಿ (ಒಎಂಸಿ) ನಿರ್ವಾಹಕ ನಿರ್ದೇಶಕರಾಗಿರುವ ಅವರ ಬಾವ ಬಿ.ವಿ. ಶ್ರೀನಿವಾಸ ರೆಡ್ಡಿ ಅವರನ್ನು 2011ರ ಸೆ.5ರಂದು ಬಳ್ಳಾರಿಯಲ್ಲಿ ಬಂಧಿಸಲಾಗಿತ್ತು.