ಜೈಪುರ: ಕಾಂಗ್ರೆಸ್ನ ಹಲವಾರು ನಾಯಕರು ಜಾಮೀನಿನ ಮೇಲೆ ಹೊರಗಿದ್ದಾರೆ. ಆ ಪಕ್ಷ ಒಂದು ‘ಬೇಲ್ ಗಾಡಿ’ಯಂತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದರು.
ಇಲ್ಲಿ ಶನಿವಾರ ನಡೆದ ಸಾರ್ವಜನಿಕ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ನ ಬಹಳಷ್ಟು ನಾಯಕರು ಮತ್ತು ಮಾಜಿ ಸಚಿವರನ್ನು ಆ ಪಕ್ಷದೊಳಗೆ ಮುಂಚೂಣಿ ನಾಯಕರೆಂದು ಗುರುತಿಸಲಾಗುತ್ತಿದೆ. ಆದರೆ, ಅವರೆಲ್ಲರೂ ಇಂದು ಜಾಮೀನಿನ ಮೇಲೆ ಹೊರಗಡೆ ಇದ್ದಾರೆ’ ಟೀಕಿಸಿದರು.
ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಲು ಎತ್ತಿನ ಗಾಡಿಯನ್ನು ಹಾಸ್ಯದ ದಾಟಿಯಲ್ಲಿ ‘ಬೇಲ್ ಗಾಡಿ’ ಎಂದು ಸಂಬೋಧಿಸಿದರು. ಆ ಪಕ್ಷದ ಉದ್ದೇಶವನ್ನು ಜನರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಈಗ ಎಲ್ಲರೂ ಕಾಂಗ್ರೆಸ್ ಅನ್ನು ‘ಬೇಲ್ ಗಾಡಿ’ ಎಂದು ಕರೆಯಲು ಶುರು ಮಾಡಿದ್ದಾರೆ ಎಂದು ಮೂದಲಿಸಿದರು.
‘ಉಗ್ರರ ಸದೆ ಬಡಿಯಲು ನಮ್ಮ ಸೇನೆಯು 2016ರಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್ ಸ್ಟ್ರೈಕ್ (ನಿರ್ಧಿಷ್ಟ ದಾಳಿ) ನಡೆಸಿತು. ಆದರೆ, ನಮ್ಮ ರಾಜಕೀಯ ಎದುರಾಳಿ ಪಕ್ಷ ಅದನ್ನು ಟೀಕಿಸುವ ಮೂಲಕ ನಮ್ಮ ಸೇನೆಯ ಸಾಮರ್ಥ್ಯವನ್ನೇ ಪ್ರಶ್ನೆ ಮಾಡಿತು. ಇಂತಹ ಬೆಳವಣಿಗೆ ಹಿಂದೆಂದೂ ಆಗಿರಲಿಲ್ಲ. ಈ ರೀತಿಯ ರಾಜಕಾರಣ ಮಾಡುವವರನ್ನು ಜನರು ಎಂದಿಗೂ ಕ್ಷಮಿಸಲಾರರು’ ಎಂದು ವಾಗ್ದಾಳಿ ಮಾಡಿದರು.
ಸೇನಾ ಸಿಬ್ಬಂದಿಗೆ ‘ಒಂದು ಶ್ರೇಣಿ, ಒಂದು ಪಿಂಚಣಿ’ ಸಮಸ್ಯೆಯನ್ನು ನಮ್ಮ ಸರ್ಕಾರ ಬಗೆಹರಿಸಿದೆ ಎಂದು ಮೋದಿ ಇದೇ ವೇಳೆ ತಿಳಿಸಿದರು.
ಸದ್ಯದಲ್ಲೇ ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಕಲ್ಯಾಣ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಆಯೋಜಿಸಿತ್ತು.