ರಾಂಚಿ: ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಶನಿವಾರ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಮೇವು ಹಗರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಲಾಲು ಪ್ರಸಾದ್ ಅವರು ರಾಜೇಂದ್ರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ರಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಲಾಲು ಪುತ್ರ ಹಾಗೂ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಬಿಹಾರದ ಭವಿಷ್ಯದ ಭರವಸೆಯ ನಾಯಕ ಎಂದು ಅವರು ಕೊಂಡಾಡಿದರು.
ಲಾಲು ಬೇಟಿಯ ವೇಳೆ ರಾಜಕೀಯ ಕುರಿತು ಯಾವುದೇ ಚರ್ಚೆ ನಡೆಯಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸತತ ಎರಡು ಅವಧಿಗೆ ಪಟ್ನಾ ಸಾಹಿಬ್ ಬಿಜೆಪಿ ಸಂಸದರಾಗಿರುವ ಶತ್ರುಘ್ನ ಸಿನ್ಹಾ 2019ರಲ್ಲಿ ಇದೇ ಕ್ಷೇತ್ರದಿಂದ ಆರ್ಜೆಡಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
‘ಬಿಹಾರ್ ಬಾಬು’ ಎಂದು ಖ್ಯಾತರಾಗಿರುವ ಸಿನ್ಹಾ ಅವರು ಪ್ರಧಾನಿ ಮೋದಿ ವಿರೋಧಿ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ.
ಕಾಂಗ್ರೆಸ್ ನಾಯಕ ಸುಭೋದ್ ಕಾಮತ್ ಸಹಾಯ್ ಕೂಡ ಸಿನ್ಹಾ ಜತೆಗಿದ್ದರು.