ನವದೆಹಲಿ: ಗುಂಪು ಸಂಘರ್ಷ ಮತ್ತು ಪ್ರಯಾಣಿಕರ ವರ್ತನೆಯ ಬಗ್ಗೆ ಗಮನವಿರಲಿ...
–ಇದುವಲಸೆ ಕಾರ್ಮಿಕರನ್ನು ತಮ್ಮ ತವರು ರಾಜ್ಯಗಳಿಗೆ ಕಳುಹಿಸಲು ‘ಶ್ರಮಿಕ್’ ವಿಶೇಷ ರೈಲುಗಳನ್ನು ಓಡಿಸುವ ರೈಲ್ವೆ ವಲಯಕ್ಕೆ ಸೋಮವಾರ ರೈಲ್ವೆ ಸಚಿವಾಲಯ ನೀಡಿರುವ ಮಾರ್ಗಸೂಚಿ.
ಶುಕ್ರವಾರದಿಂದ 60 ‘ಶ್ರಮಿಕ್’ ವಿಶೇಷ ರೈಲುಗಳು ಸಂಚರಿಸುತ್ತಿದ್ದು, ಪ್ರಯಾಣಿಕರ ಭದ್ರತೆ ಮತ್ತು ನೈರ್ಮಲ್ಯೀಕರಣಕ್ಕೆ ಸಂಬಂಧಿಸಿದಂತೆ ಸಚಿವಾಲಯವು ಮಾರ್ಗಸೂಚಿಗಳನ್ನು ಹೊರಡಿಸಿದೆ.
ರೈಲುಗಳಲ್ಲಿ ಪ್ರಯಾಣಿಕರ ಬಗ್ಗೆ ತೀವ್ರ ನಿಗಾ ಇಡಬೇಕು. ಯಾವುದೇ ಗುಂಪು ಸಂರ್ಘರ್ಷ ನಡೆಸಿದಲ್ಲಿ ಅಂಥವರನ್ನು ಗುಂಪಿನಿಂದ ಹೊರಗಿಡಬೇಕು. ಸಂಘರ್ಷ ಹೆಚ್ಚಿದಲ್ಲಿ ಆಯಾ ರಾಜ್ಯ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಭದ್ರತೆಗಾಗಿ ಮಾಜಿ ಸೈನಿಕರು, ಗೃಹರಕ್ಷಕರು, ಖಾಸಗಿ ಭದ್ರತಾ ಸಿಬ್ಬಂದಿಯನ್ನು ನೇಮಿಸಿ ಕೊಳ್ಳಬಹುದು. ಪ್ರಯಾಣಿಕರ ಬಳಕೆಗೆ ದ್ರವರೂಪದ ಸೋಪ್ (ಲಿಕ್ವಿಡ್ ಸೋಪ್) ಇಡಬೇಕು. ಕನಿಷ್ಠ ಸಿಬ್ಬಂದಿ ಬಳಸಿ ಶೌಚಾಲಯಗಳನ್ನು ಶುಚಿಗೊಳಿಸಬೇಕು ಎಂದೂ ಹೇಳಲಾಗಿದೆ.