ಜಮ್ಮು : ಎಲ್ಲ ಜನರಿಗೆ ಮೆಚ್ಚುಗೆಯಾಗಲು ಅಟಲ್ ಬಿಹಾರಿ ವಾಜಪೇಯಿಯಂತೆ ತಾಳ್ಮೆಯಿಂದಿರಿ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫರೂಕ್ ಅಬ್ಜುಲ್ಲಾ ಪ್ರಧಾನಿ ಮೋದಿಗೆ ಸಲಹೆ ನೀಡಿದ್ದಾರೆ. ಗುರುವಾರ ಸಮಾರಂಭವೊಂದರಲ್ಲಿ ಮಾತನಾಡಿದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖಂಡ ಅಬ್ದುಲ್ಲಾ, ಬಿಜೆಪಿ ಒಡಕುಂಟುಮಾಡುವ ನೀತಿ ಪಾಲಿಸುತ್ತಿದೆ ಎಂದು ದೂರಿದ್ದಾರೆ. ಜವಾಹರ್ ಲಾಲ್ ನೆಹರು ಅವರು ಮೊದಲ ಬಾರಿ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿದಾಗ ಭಾರತದಲ್ಲಿ ಅಧಿಕಾರಕ್ಕೆ ಬರುವ ರಾಜಕೀಯ ಪಕ್ಷವೊಂದು ದೇಶವನ್ನುವಿಭಜಿಸುತ್ತದೆ ಎಂದು ಅವರು ಊಹಿಸಿರಲಿಲ್ಲ. ಬ್ರಿಟಿಷರು ನಮ್ಮ ದೇಶವನ್ನು ಭಾರತ- ಪಾಕಿಸ್ತಾನವಾಗಿ ವಿಭಜಿಸಿದರು. ಇದೀಗ ಕೇಂದ್ರದಲ್ಲಿ ಅಧಿಕಾರವಿರುವ ಪಕ್ಷವು ಇದೇ ನೀತಿ ಮುಂದುವರಿಸಿದರೆ ದೇಶ ಇನ್ನಷ್ಟು ವಿಭಜನೆ ಆಗುತ್ತದೆ.
ಶ್ರೀರಾಮ ನಮಗೆ ಸೇರಿದ್ದು ಎಂದು ಬಿಜೆಪಿ ವಾದಿಸುತ್ತದೆ.ಆದರೆ ಪುರಾಣಗಳ ಪ್ರಕಾರ ಶ್ರೀರಾಮ ಇಡೀ ಜಗತ್ತಿಗೆ ಸೇರಿದವನು.ಬರೀ ಹಿಂದೂಗಳಿಗೆ ಮಾತ್ರ ಅಲ್ಲ ಎಂದಿದ್ದಾರೆ ಅಬ್ದುಲ್ಲಾ.
ವಾಜಪೇಯಿಯಂತೆ ತಾಳ್ಮೆಯಿಂದಿರಿ ಎಂದು ಮೋದಿಗೆ ಸಲಹೆ ನೀಡಿದ ಅಬ್ದುಲ್ಲಾ , ಪ್ರಧಾನಿಯವರೇ ನೀವು ಈ ದೇಶವನ್ನಾಳಬೇಕಾದರೆ, ನೀವು ತಾಳ್ಮೆವಹಿಸಬೇಕು. ಎಲ್ಲರೂ ನಿಮ್ಮನ್ನು ಮೆಚ್ಚಬೇಕು, ಈ ದೇಶದಲ್ಲಿ ಆಡಳಿತ ಮುಂದುವರಿಸಬೇಕಾದರೆ ನಾವು ತಾಳ್ಮೆ ಬೇಕು ಎಂದಿದ್ದಾರೆ.
ನೆಹರು ಅವರಿಂದಲೇ ಈ ದೇಶ ಒಗ್ಗಟ್ಟಾಗಿದೆ. ಯುದ್ಧ ಯಾವುದಕ್ಕೂ ಪರಿಹಾರವಲ್ಲ.ನಾವು ನಮ್ಮ ಮನೆಯಲ್ಲಿ ಸುರಕ್ಷಿತವಾಗಿರುತ್ತೇವೆ ಆದರೆ ಯೋಧರು ಅಲ್ಲಿ ಜೀವ ಕಳೆದುಕೊಳ್ಳುತ್ತಾರೆ. ಚೀನಾ ಮತ್ತು ಪಾಕಿಸ್ತಾನದೊಂದಿಗೆ ನಮಗೆ ಯುದ್ಧ ಬೇಕಿಲ್ಲ.ಆ ದೇಶಗಳು ಅಭಿವೃದ್ಧಿ ಹೊಂದಲಿ ಎಂದು ನಾವು ಬಯಸುತ್ತೇವೆ ಎಂದು ಅಬ್ದುಲ್ಲಾ ಹೇಳಿದ್ದಾರೆ.