ಭೋಪಾಲ್:ಸಚಿವಾಲಯಗಳಲ್ಲಿ ವಂದೇ ಮಾತರಂ ಹಾಡುವ ಪರಿಪಾಠವನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ಮತ್ತೆ ಜಾರಿಗೊಳಿಸದಿದ್ದಲ್ಲಿ, ಬಿಜೆಪಿ ಶಾಸಕರು ಅಧಿವೇಶನದ ಮೊದಲ ದಿನ ಗೀತೆಯನ್ನು ಹಾಡಲಿದ್ದಾರೆ ಎಂದುಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಜನವರಿ ಒಂದರಂದು ಯಾವುದೇ ಸಚಿವಾಲಯಗಳಲ್ಲಿ ಗೀತೆ ಹಾಡಿಲ್ಲ. ಇದಕ್ಕೆ ಮುಖ್ಯಮಂತ್ರಿ ಕಮಲ್ನಾಥ್ ಅವರ ನಿರ್ದೇಶನ ಇತ್ತೇ ಎಂದು ಬಿಜೆಪಿ ಪ್ರಶ್ನಿಸಿದೆ.
ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಚಿವಾಲಯಗಳಲ್ಲಿ ತಿಂಗಳ ಮೊದಲ ಕೆಲಸದ ದಿನದಂದು ವಂದೇ ಮಾತರಂ ಹಾಡುವ ಸಂಪ್ರದಾಯ ಜಾರಿಗೊಳಿಸಿದ್ದರು.
13 ವರ್ಷಗಳ ಸಂಪ್ರದಾಯ ಪಾಲನೆಯಾಗದ ಕಾರಣ ಜನವರಿ 7ರಂದು ವಲಭ ಭವನದ ಸಚಿವಾಲಯ ಆವರಣದಲ್ಲಿ ಬಿಜೆಪಿ ಶಾಸಕರು ಗೀತೆ ಹಾಡಲಿದ್ದಾರೆ ಎಂದು ಚೌಹಾಣ್ ಟ್ವೀಟ್ ಮಾಡಿದ್ದಾರೆ. ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಜನರಿಗೂ ಅವರು ಆಹ್ವಾನ ನೀಡಿದ್ದಾರೆ.