ತಿರುವನಂತಪುರ: ಸಂಪ್ರದಾಯವಾದಿಗಳ ಆಕ್ರೋಶಕ್ಕೆ ತುತ್ತಾಗಿದ್ದ ಕೇರಳದ ಪ್ರಸಿದ್ಧ ನಗ್ನ ಮಹಿಳೆಯದೈತ್ಯ ಪ್ರತಿಮೆ ‘ಯಕ್ಷಿ’ಗೆ 50 ವರ್ಷ ಪೂರ್ಣಗೊಂಡಿದ್ದು, ಈಗ ಕಂಚಿನ ಲೇಪನದೊಂದಿಗೆ ಪುನರುಜ್ಜೀವನಗೊಳ್ಳುತ್ತಿದೆ.
ಪಾಲಕ್ಕಾಡ್ ಜಿಲ್ಲೆಯ ಮಲಂಪುಳದ ಉದ್ಯಾನದಲ್ಲಿ ಈ ಪ್ರತಿಮೆ ಇದೆ. 1969ರಲ್ಲಿ ಹಿರಿಯ ಕಲಾವಿದ ಕನಯಿ ಕುಹ್ಹಿರಾಮನ್ ಅವರು ಈ ಪ್ರತಿಮೆಯನ್ನು ಕೆತ್ತನೆ ಮಾಡಿದ್ದಾರೆ.
‘ಯಕ್ಷಿ’ಯಲ್ಲಿರುವ ಮಹಿಳೆ, ತಲೆಗೂದಲನ್ನು ಹರಡಿಕೊಂಡು, ಕಾಲುಗಳನ್ನು ಚಾಚಿಕೊಂಡು, ಅರ್ಧ ಕಣ್ಣು ಮುಚ್ಚಿದ್ದು, ಪಶ್ಚಿಮಘಟ್ಟದ ಪರ್ವತ ಶ್ರೇಣಿಗಳತ್ತ ಮುಖ ಮಾಡಿ ಕುಳಿತಿದ್ದಾಳೆ.
ಕೇರಳದ ಪ್ರಸಿದ್ಧ ಶಿಲ್ಪಗಳಲ್ಲಿ ಒಂದಾದ ‘ಯಕ್ಷಿ’ (ಸ್ಥಳೀಯ ಭಾಷೆಯಲ್ಲಿ ದೇವತೆ) ಅಪರೂಪದ ಕಲಾ ಕೌಶಲದಿಂದ ಕೂಡಿದೆ.
ಶಿಲ್ಪಿ ಕನಯಿ ಕುಹ್ಹಿರಾಮನ್ ಅವರಿಗೆ ಈಗ 81 ವರ್ಷ ವಯಸ್ಸಾಗಿದ್ದು, ಪ್ರತಿಮೆಯ ಪುನರುಜ್ಜೀವನ ಕೆಲಸದಲ್ಲಿ ನಿರತರಾಗಿದ್ದಾರೆ. ಇನ್ನೊಂದು ವಾರದಲ್ಲಿ ಕೆಲಸ ಮುಗಿಯಲಿದೆ ಎಂದು ಕುಹ್ಹಿರಾಮನ್ ಹೇಳಿದರು.
‘1960ರಲ್ಲಿ ಸಾರ್ವಜನಿಕ ಸ್ಥಳದಲ್ಲಿ ಈ ಪ್ರತಿಮೆ ಕೆತ್ತನೆ ಮಾಡಲು ಮುಂದಾದಾಗ ಸಾಕಷ್ಟು ವಿರೋಧ ಎದುರಿಸಬೇಕಾಯಿತು. ಪ್ರತಿಮೆ ಅಶ್ಲೀಲವಾಗಿದೆ, ರಾಜ್ಯದ ಸಂಸ್ಕೃತಿ ಮತ್ತು ನೈತಿಕೆಗೆ ವಿರುದ್ಧವಾಗಿದೆ ಎಂಬ ಆರೋಪಗಳು ಬಂದಿದ್ದವು’ ಎಂದರು.
‘ಅದರಲ್ಲಿ ತಪ್ಪೇನಿದೆ. ಎಂದು ಅವರನ್ನು ನಾನು ಕೇಳಿದ್ದೆ. ನಗ್ನ ಮಹಿಳೆಯ ಶಿಲ್ಪಗಳು ದೇವಾಲಯಗಳಲ್ಲಿ ಇಲ್ಲವೇ?. ನನಗೆ ಪ್ರಕೃತಿಯೇ ದೇವಾಲಯ ಎಂದು ಪ್ರತಿಪಾದನೆ ಮಾಡಿದ್ದೆ’ ಎಂದು ವಿವರಿಸಿದರು.