ಮಂಡ್ಯ: ಸಣ್ಣ ನೀರಾವರಿ ಸಚಿವ ಗುರುವಾರ ರಾತ್ರಿ ಕರೆದಿದ್ದ ಮೈತ್ರಿ ಮುಖಂಡರ ಸಭೆಗೆ ಬಹುತೇಕ ಕಾಂಗ್ರೆಸ್ ಮುಖಂಡರು ಗೈರು ಹಾಜರಾಗಿದ್ದರು. ಆ ಮೂಲಕ ಕಾಂಗ್ರೆಸ್ ಮುಖಂಡರು ಮೈತ್ರಿ ಧರ್ಮ ಪಾಲನೆಗೆ ನಿರಾಕರಣೆ ಮಾಡಿರುವುದು ಬಹಿರಂಗಗೊಂಡಿದೆ.
ಬುಧವಾರ ನಡೆದ ಸುಮಲತಾ ಸಮಾವೇಶಕ್ಕೆ ಹಲವು ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮೈತ್ರಿ ಮುಖಂಡರ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸುವಂತೆ ಸೂಚನೆ ಕೊಟ್ಟಿದ್ದರು.
ಅದರಂತೆ ಪುಟ್ಟರಾಜು ಕರೆದ ಸಭೆಗೆ ಕಾಂಗ್ರೆಸ್ ಮುಖಂಡರಾದ ಎಂ.ಎಸ್.ಆತ್ಮಾನಂದ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್, ರಾಮಲಿಂಗಯ್ಯ ಹೊರತುಪಡಿಸಿ ಮತ್ತಾರೂ ಭಾಗವಹಿಸಲಿಲ್ಲ.
ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ ಮುಂತಾದ ಪ್ರಮುಖ ನಾಯಕರು ಗೈರಾಗಿದ್ದರು.
ಕೆ.ಆರ್.ಪೇಟೆ ಶಾಸಕನ ವಿರುದ್ಧ ಎಫ್ಐಆರ್ ದಾಖಲು
ಚಿತ್ರನಟರಾದ ದರ್ಶನ್ ಹಾಗೂ ಯಶ್ ಅವರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಕೆ.ಆರ್.ಪೇಟೆ ಶಾಸಕ ಕೆ.ಸಿ.ನಾರಾಯಣಗೌಡರ ವಿರುದ್ಧ ಕೆ.ಆರ್.ಪೇಟೆ ಪಟ್ಟಣ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಶಾಸಕರು ನೀಡಿರುವ ಹೇಳಿಕೆಯಿಂದ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಚುನಾವಣಾಧಿಕಾರಿ ರವಿಕುಮಾರ್ ನೀಡಿರುವ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಾಗಿದೆ. ಸಾರ್ವಜನಿಕರಿಗೆ ಭಯದ ವಾತಾವರಣ ನಿರ್ಮಾಣ ಆರೋಪದ ಮೇಲೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಸಿನಿಮಾ ನಟರು ಲೋಕಸಭೆ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬೆಂಬಲ ನೀಡಿರುವುದಕ್ಕೆ ನಾರಾಯಣಗೌಡ ಬೆದರಿಕೆ ಹಾಕಿದ್ದರು. ‘ನಮ್ಮ ಸರ್ಕಾರವಿದೆ. ನಿಮ್ಮ ಆಸ್ತಿ ಪಾಸ್ತಿಯ ತನಿಖೆ ಮಾಡಿಸಿದರೆ ಬೀದಿಗೆ ಬೀಳುತ್ತೀರಿ’ ಎಂದು ಎಚ್ಚರಿಕೆ ನೀಡಿದ್ದರು.