ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ (67 ಮತ್ತು 212)ರಾತ್ರಿ ವಾಹನಗಳ ಸಂಚಾರಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಮತ್ತುಸಂರಕ್ಷಿತ ಪ್ರದೇಶದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಒತ್ತಾಯಿಸಿ ತಾಲ್ಲೂಕಿನ ಮತ್ತು ನಗರ ಪ್ರದೇಶದ ಪರಿಸರಪ್ರೇಮಿಗಳು ಭಾನುವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಮೇಲುಕಾಮನಹಳ್ಳಿ ಗ್ರಾಮದಲ್ಲಿರುವ ಬಂಡೀಪುರ ಸಂರಕ್ಷಿತ ಪ್ರದೇಶದಪ್ರವೇಶದ್ವಾರದ ಬಳಿ ಜಮಾಯಿಸಿದ 100ಕ್ಕೂ ಹೆಚ್ಚು ಪ್ರತಿಭಟನಾಕಾರರು ‘ಬಂಡೀಪುರ ಉಳಿಸಿ ಪ್ರಾಣಿಗಳನ್ನು ರಕ್ಷಿಸಿ’ ಎಂಬ ನಾಮಫಲಕಗಳನ್ನು ಪ್ರದರ್ಶಿಸಿದರು.
‘ರಾತ್ರಿ ಹೊತ್ತುಸಂಚಾರದ ನಿರ್ಬಂಧವಿದ್ದರೂ ಮೂರು ರಾಜ್ಯಗಳ 12 ಬಸ್ಗಳಿಗೆ ಮತ್ತು ತುರ್ತು ವಾಹನಗಳಿಗೆ ಅವಕಾಶ ನೀಡಲಾಗುತ್ತಿದೆ. ಎಲ್ಲ ವಾಹನಗಳಿಗೆ ಅವಕಾಶ ನೀಡಿದರೆ ನಿಶಾಚಾರಿ ಪ್ರಾಣಿಗಳಿಗೆ ತೊಂದರೆಯಾಗುತ್ತದೆ. ಜೊತೆಗೆ, ಪರಿಸರ ಮಾಲಿನ್ಯವೂ ಹೆಚ್ಚಾಗುತ್ತದೆ’ ಎಂದು ಪರಿಸರಪ್ರೇಮಿ ಶ್ರೀಕಂಠ ತಿಳಿಸಿದರು.
‘ಈ ಪ್ರದೇಶದಲ್ಲಿ ಮೇಲ್ಸೇತುವೆಕಾಮಗಾರಿ ಆರಂಭಿಸಿದರೆ ಅದು ಮುಗಿಯಲು ವರ್ಷಗಳೇ ಹಿಡಿಯುತ್ತದೆ. ಇದರಿಂದಕಾಡಿನಲ್ಲಿರುವ ಪ್ರಾಣಿಗಳ ಸಹಜ ಜೀವನಕ್ಕೆ ಧಕ್ಕೆಯಾಗುತ್ತದೆ. ಕಾಮಗಾರಿಯಿಂದಾಗಿ ಅನೇಕ ಗಿಡಮರಗಳೂ ನಾಶವಾಗುತ್ತವೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ರಾಜ್ಯದ ವಿವಿಧ ಕಡೆಗಳಿಂದ ಬಂದಿದ್ದ ಪರಿಸರಪ್ರೇಮಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು.
ಬಂಡೀಪುರಅಭಯಾರಣ್ಯದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 212ರಲ್ಲಿ ಐದು ಕಡೆ ಮೇಲ್ಸೇತುವೆ ನಿರ್ಮಿಸಿದರೆ ರಾತ್ರಿ ವೇಳೆ ವಾಹನಗಳ ಸಂಚಾರಕ್ಕೆ ಅನುಮತಿ ನೀಡಬಹುದು ಎಂದು ಇತ್ತೀಚೆಗೆ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯಸುಪ್ರೀಂ ಕೋರ್ಟ್ಗೆ ತಿಳಿಸಿತ್ತು.
‘ಮೇಲ್ಸೇತುವೆಗಳನ್ನು ನಿರ್ಮಾಣ ಮಾಡಿದರೆ, ಪ್ರಾಣಿಗಳ ಓಡಾಟಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ. ಕೇರಳ ಹಾಗೂ ಕೇಂದ್ರ ಸರ್ಕಾರಗಳು ಶೇ 50ರಷ್ಟು ಪಾಲುದಾರಿಕೆಯಲ್ಲಿ ₹ 500 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಬಹುದಾಗಿದೆ’ ಎಂದು ಸಚಿವಾಲಯ ತಿಳಿಸಿತ್ತು.