ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೆ ನೂತನ ಶಾಸಕರ ಒತ್ತಡ ದಿನೇ ದಿನೇ ಹೆಚ್ಚಾಗುತ್ತಿರುವ ಕಾರಣ ಜನವರಿ ಮೊದಲ ವಾರದಲ್ಲೇ ಸಂಪುಟ ವಿಸ್ತರಿಸುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಾರಾಂತ್ಯದಲ್ಲಿ ದೆಹಲಿಗೆ ಹೋಗಿ ಅಮಿತ್ ಶಾ ಅವರ ಜತೆ ಸಂಪುಟ ವಿಸ್ತರಣೆ ಸಂಬಂಧ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶೂನ್ಯ ಮಾಸವಿದ್ದರೂ ಸಚಿವರಾಗಿ ಪ್ರಮಾಣ ಸ್ವೀಕರಿಸುವುದಕ್ಕೆ ನೂತನ ಶಾಸಕರು ಹಿಂದೇಟು ಹಾಕುತ್ತಿಲ್ಲ. ಆದಷ್ಟು ಬೇಗ ಸಚಿವರಾಗಬೇಕು ಎಂಬ ತವಕದಲ್ಲಿದ್ದಾರೆ. ವಿಳಂಬವಾದಷ್ಟೂ ತಮ್ಮ ಬೇಡಿಕೆಗಳನ್ನು ಪಕ್ಷ ಮೂಲೆಗೆ ಸರಿಸುವ ಸಾಧ್ಯತೆ ಇದೆ ಎಂಬ ಆತಂಕ ಅವರನ್ನು ಕಾಡಿದೆ. ಇದರಿಂದ ಕೆಲವು ಬೇಸರಗೊಂಡಿದ್ದಾರೆ ಎನ್ನಲಾಗಿದೆ.
ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರದ ಬಳಿಕ ಎಸ್.ಟಿ.ಸೋಮಶೇಖರ್ ಸೇರಿದಂತೆ ಹಲವು ಶಾಸಕರು ಮಾಧ್ಯಮ ಪ್ರತಿನಿಧಿಗಳಲ್ಲಿ ತಮ್ಮ ಅಸಮಾಧಾನ ತೋಡಿಕೊಂಡಿದ್ದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ವನವಾಸ ಅನುಭವಿಸಿದ್ದೂ ಅಲ್ಲದೆ, ಶಾಸಕರಾಗಿ ಆಯ್ಕೆ ಆದ ಬಳಿಕವೂ ವನವಾಸ ಅನುಭವಿಸಬೇಕಾಗಿದೆ ಎಂಬುದು ಅವರ ಅಳಲು.
ಲಾಭದಾಯಕ ಖಾತೆ ಕೊಟ್ಟರೆ ಕಷ್ಟ: ನೂತನ ಶಾಸಕರಿಗೆ ಸಚಿವ ಸ್ಥಾನ ಕೊಡುವುದು ಖಚಿತ. ಆದರೆ, ಅವರು ಈ ಹಿಂದೆ ಪಟ್ಟು ಹಿಡಿದಂತೆ ಲಾಭದಾಯಕ ಖಾತೆಗಳನ್ನು ನೀಡಿದರೆ ಮುಂದೆ ಅವರನ್ನು ನಿಯಂತ್ರಿಸುವುದು ಕಷ್ಟವಾಗಬಹುದು ಎಂದು ಬಿಜೆಪಿಯ ಕೆಲವು ಹಿರಿಯ ನಾಯಕರು ಮುಖ್ಯಮಂತ್ರಿ ಸಮ್ಮುಖದಲ್ಲಿ ಆತಂಕ ತೋಡಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಖಾತೆಗಳ ಮರು ಹಂಚಿಕೆ ಯಾವ ರೀತಿ ಮಾಡಬೇಕು. ನೂತನ ಶಾಸಕರಿಗೆ ಅಸಮಾಧಾನವೂ ಆಗಬಾರದು, ಲಾಭದಾಯಕ ಖಾತೆಗಳು ಅವರ ಮಡಿಲಿಗೆ ಬೀಳಲೂಬಾರದು. ಅದಕ್ಕಾಗಿ ಏನು ಮಾಡಬೇಕು ಎಂಬ ಚರ್ಚೆ ನಡೆದಿದೆ ಎಂದು ಮೂಲಗಳು ಹೇಳಿವೆ.