ಶ್ರವಣಬೆಳಗೊಳ: ‘ಬಾಹುಬಲಿ ತ್ಯಾಗದ ಮಹಾನ್ ಸಂದೇಶ ನೀಡಿದ್ದಾರೆ’ ಎಂದು ಸುತ್ತೂರು ಕ್ಷೇತ್ರದ ಪೀಠಾಧಿಪತಿ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಭಾನುವಾರ ಹೇಳಿದರು.
ಪಟ್ಟಣದ ವಿಂಧ್ಯಗಿರಿ ಬಾಹುಬಲಿ ಬೆಟ್ಟದ ಮೇಲೆ ಕರ್ನಾಟಕ ಮಹಿಳಾ ಒಕ್ಕೂಟ ಆಯೋಜಿಸಿದ್ದ ಮಹಾಮಸ್ತಕಾಭಿಷೇಕ ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶ್ರವಣಬೆಳಗೊಳದ ಪಾವಿತ್ರ್ಯ ಬಾಹುಬಲಿ ಮೂರ್ತಿಯಿಂದ ಮತ್ತಷ್ಟು ಹೆಚ್ಚಿದೆ. 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕದ ಸಾರಥ್ಯವನ್ನು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ 4 ಬಾರಿ ಯಶಸ್ವಿಯಾಗಿ ನಡೆಸಿದ್ದಾರೆ
ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು, ‘ಸುತ್ತೂರಿನ ಶ್ರೀಗಳು ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರು ಕಬಿನಿ ನದಿಯ ಜಲ ತಂದು ಅಭಿಷೇಕ ನೆರವೇರಿಸಿರುವುದು ತುಂಬಾ ಸಂತಸ ತಂದಿದೆ’ ಎಂದು ಹೇಳಿದರು.
ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅವರನ್ನು ಮಂಗಳವಾದ್ಯ, ಮೈಸೂರು ಬ್ಯಾಂಡ್ಸೆಟ್ ಮತ್ತು ಪೂರ್ಣಕುಂಭ
ದೊಂದಿಗೆ ಸ್ವಾಗತಿಸಿದರು. ನಂತರ ಡೋಲಿ ಮೂಲಕ ಬೆಟ್ಟ ಏರಿ ಮಹಾಮಸ್ತಕಾಭಿಷೇಕ ಕಾರ್ಯದಲ್ಲಿ ಪಾಲ್ಗೊಂಡರು. ನಂತರ ಕ್ಷೇತ್ರದ ವತಿಯಿಂದ ರಜತ ಕಳಸ ನೀಡಿ ಸುತ್ತೂರು ಶ್ರೀಗಳನ್ನು ಗೌರವಿಸಲಾಯಿತು. ಕಂಬದ ಹಳ್ಳಿಯ ಬಾನುಕೀರ್ತಿ ಸ್ವಾಮೀಜಿ, ಬೆಳಗಾವಿಯ ಮಾಜಿ ಶಾಸಕ ಸಂಜಯ್ ಪಾಟೀಲ್ ಉಪಸ್ಥಿತರಿದ್ದರು.