ದಾಬಸ್ಪೇಟೆ: ‘ಮತ ಹಾಕುವವರೆಗೆ ಮಾತ್ರ ನಿಮಗೆ ಅಧಿಕಾರ, ನಂತರ ಯಾರು ಗೆಲ್ಲುತ್ತಾರೋ ಅವರದ್ದೇ ಕಾರುಬಾರು. ಆದರೆ, ನಮ್ಮ ಪಕ್ಷದ ಧ್ಯೇಯ ಹಾಗಲ್ಲ. ಇಲ್ಲಿ ನಿಮ್ಮದೇ ಅಧಿಕಾರ ಹಾಗೂ ಕಾರುಬಾರು’ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸ್ಥಾಪಕ ಉಪೇಂದ್ರ ಹೇಳಿದರು.
ಪಕ್ಷದ ಅಭ್ಯರ್ಥಿಯಾಗಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಿರುವ ಜಿ.ಮುನಿರಾಜು ಪರವಾಗಿ ದಾಬಸ್ಪೇಟೆ ಪಟ್ಟಣದಲ್ಲಿ ಅವರು ಮತಯಾಚನೆ ಮಾಡಿದರು.
‘ನಮಗೆ ರಾಜಕೀಯ ಬೇಡ, ನಮಗೆ ಬೇಕಿರುವುದು ಪ್ರಜಾಕೀಯ. ಬನ್ನಿ ಬದಲಾವಣೆ ತರೋಣ. ನಾವು ನಾಯಕರು ಅಲ್ಲ, ನಿಮ್ಮಿಂದ ಸಂಬಳ ಪಡೆದು ಕೆಲಸ ಮಾಡುವ ಕಾರ್ಮಿಕರು. ನಿಮ್ಮಿಂದ ಮತ ಪಡೆದು 5 ವರ್ಷ ನಿಮ್ಮನ್ನು ಅಡಿಯಾಳಾಗಿಸಿಕೊಳ್ಳುವ ವ್ಯವಸ್ಥೆ ಇಂದಿದೆ. ನಮ್ಮದು ಪ್ರಜ್ಞಾವಂತ ಪ್ರಜೆಗಳ ಪಕ್ಷ. ನಮಗೆ ಸಾಥ್ ನೀಡಿ’ ಎಂದರು.