ಉಜಿರೆ: ಧರ್ಮಸ್ಥಳ ಸಮೀಪದ ಕನ್ಯಾಡಿಯ ರಾಮಕ್ಷೇತ್ರದಲ್ಲಿ ಸೋಮವಾರ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ನೇತೃತ್ವದಲ್ಲಿ ರಾಷ್ಟ್ರೀಯ ಧರ್ಮ ಸಂಸತ್ ನಡೆಯಲಿದ್ದು, ದೇಶಾದ್ಯಂತದ 2 ಸಾವಿರಕ್ಕೂ ಅಧಿಕ ಸಾಧು, ಸಂತರು ಪಾಲ್ಗೊಳ್ಳಲಿದ್ದಾರೆ.
ಪ್ರತಿ ಹಳ್ಳಿಯಲ್ಲಿ ಗುರುಕುಲ ಮಾದರಿಯ ಅಂಗನವಾಡಿ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಸನಾತನ ಧರ್ಮವನ್ನು ಉಳಿಸುವ ಪ್ರಯತ್ನ ನಡೆಯಬೇಕು ಎಂಬ ಮುಖ್ಯ ಧ್ಯೇಯವನ್ನಿಟ್ಟುಕೊಂಡು ಈ ಧರ್ಮ ಸಂಸತ್ ನಡೆಯುತ್ತಿದೆ.
ಸೋಮವಾರ ಬೆಳಿಗ್ಗೆ 10.30ಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಧರ್ಮ ಸಂಸತ್ ಉದ್ಘಾಟಿಸಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸುವರು.
ಪ್ರಧಾನ ವೇದಿಕೆಯಾದ ಶ್ರೀ ಆತ್ಮಾನಂದ ಸರಸ್ವತಿ ವೇದಿಕೆಯಲ್ಲಿ ಧರ್ಮ ಸಂಸದ್ ನಡೆಯಲಿದೆ. 15 ಸಾವಿರ ಮಂದಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ.
ರಾಮಕ್ಷೇತ್ರವನ್ನು ಸುಂದರವಾಗಿ ಅಲಂಕರಿಸಲಾಗಿದೆ. ಪಾಕಶಾಲೆ, ಭೋಜನ ಶಾಲೆ ಸಿದ್ಧಗೊಂಡಿದೆ. ಭಾನುವಾರ ಸಂಜೆ 4 ಗಂಟೆಗೆ ಉಜಿರೆಯಿಂದ ಸಾಧು-ಸಂತರ ಶೋಭಾಯಾತ್ರೆ ನಡೆಯಲಿದೆ.
ಧರ್ಮ ಸಂಸತ್ ಜತೆಯಲ್ಲಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಪಟ್ಟಾಭಿಷೇಕದ ದಶಮಾನೋತ್ಸವವೂ ನಡೆಯಲಿದೆ.