ಉಜಿರೆ: ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಇದೇ 22ರಿಂದ 27ರವರೆಗೆ ನಡೆಯಲಿವೆ.
ಧರ್ಮಸ್ಥಳದ ಪ್ರೌಢ ಶಾಲಾ ಆವರಣದಲ್ಲಿ ರಾಜ್ಯ ಮಟ್ಟದ ವಸ್ತು ಪ್ರದರ್ಶನ ಆಯೋಜಿಸಿದ್ದು, ಮುನ್ನೂರಕ್ಕೂ ಹೆಚ್ಚು ಮಳಿಗೆಗಳು ಸಜ್ಜುಗೊಂಡಿವೆ. ಪ್ರತಿ ದಿನ ಧರ್ಮ, ಕಲೆ, ಸಾಹಿತ್ಯಕ್ಕೆ ಸಂಬಂಧಿಸಿದ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ.
22 ರಿಂದ ಪ್ರತಿ ದಿನ ಬೆಳಿಗ್ಗೆ 9 ರಿಂದ ರಾತ್ರಿ 9ರ ವರೆಗೆ ವಸ್ತು ಪ್ರದರ್ಶನ ವೀಕ್ಷಿಸಬಹುದಾಗಿದೆ. ಸಂಜೆ 7 ರಿಂದ ವಸ್ತು ಪ್ರದರ್ಶನ ವೇದಿಕೆಯಲ್ಲಿ ಸಂಗೀತ, ನಾಟಕ, ನೃತ್ಯ, ಯಕ್ಷಗಾನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
25 ರಂದು ಸರ್ವ ಧರ್ಮ ಸಮ್ಮೇಳನದ ಅಧಿವೇಶನವನ್ನು ಲೋಕಸಭೆ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಉದ್ಘಾಟಿಸುವರು. ಇಸ್ಕಾನ್ ಹಿರಿಯ ವಿದ್ವಾಂಸ ಗೌರ್ ಗೋಪಾಲದಾಸ್ ಅಧ್ಯಕ್ಷತೆ ವಹಿಸುವರು. ಮೈಸೂರಿನ ಪೋಕಸ್ ಅಕಾಡೆಮಿಯ ಮುಖ್ಯಕಾರ್ಯನಿರ್ವಾಹಕ ಡಿ.ಟಿ. ರಾಮಾನುಜಂ, ಮಂಗಳೂರಿನ ದಿ ಟೈಮ್ಸ್ ಗ್ರೂಪ್ಸ್ನ ಮುಖ್ಯ ಮಹಾ ವ್ಯವಸ್ಥಾಪಕ ಕದ್ರಿ ನವನೀತ ಶೆಟ್ಟಿ ಮತ್ತು ಲೇಖಕ ಬೊಳುವಾರ್ ಮಹ್ಮದ್ ಕುಂಞಿ ಉಪನ್ಯಾಸ ನೀಡುವರು. 26 ರಂದು ಸಾಹಿತ್ಯ ಸಮ್ಮೇಳನದ ಅಧಿವೇಶನವನ್ನು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಉದ್ಘಾಟಿಸುವರು. ರಾತ್ರಿ 12 ಗಂಟೆಯ ನಂತರ ಮಂಜುನಾಥ ಸ್ವಾಮಿಯ ಲಕ್ಷ ದೀಪೋತ್ಸವ ನಡೆಯಲಿದೆ.