ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್‌ಗೆ 11 ಜನ ಅವಿರೋಧ ಆಯ್ಕೆ

Last Updated 4 ಜೂನ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಸ್ಪರ್ಧಿಸಿದ್ದ ಎಲ್ಲ 11 ಅಭ್ಯರ್ಥಿಗಳೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿ ಎ.ಎಸ್‌.ಕುಮಾರಸ್ವಾಮಿ ಅವರು ಸೋಮವಾರ ಆಯ್ಕೆಯಾದವರ ಹೆಸರನ್ನು ಅಧಿಕೃತವಾಗಿ ಘೋಷಿಸಿ ಪ್ರಮಾಣಪತ್ರ ವಿತರಿಸಿದರು. ಬಿಜೆಪಿಯಿಂದ 5, ಕಾಂಗ್ರೆಸ್‌ನಿಂದ 4 ಹಾಗೂ ಜೆಡಿಎಸ್‌ನಿಂದ ಇಬ್ಬರು ಸ್ಪರ್ಧಿಸಿದ್ದರು.

ಆಯ್ಕೆಯಾದವರ ಕಿರು ಪರಿಚಯ:

ಬಿಜೆಪಿ:

ರುದ್ರೇಗೌಡ: ಶಿವಮೊಗ್ಗ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎಸ್‌.ರುದ್ರೇಗೌಡ ಅವರು ಯಡಿಯೂರಪ್ಪ ಅವರ ಆಪ್ತ ಎಂದೇ ಗುರುತಿಸಿಕೊಂಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ  ಶಿವಮೊಗ್ಗ ವಿಧಾನಸಭಾ ಕ್ಷೇತ್ರವನ್ನು ಕೆ.ಎಸ್‌.ಈಶ್ವರಪ್ಪ ಅವರಿಗೆ ಬಿಟ್ಟುಕೊಟ್ಟಿದ್ದರು.  ಅದಕ್ಕೆ ಪ್ರತಿಯಾಗಿ ವಿಧಾನ ಪರಿಷತ್ತಿಗೆ ಆಯ್ಕೆ ಮಾಡುವ ಭರವಸೆ
ಯನ್ನು ಯಡಿಯೂರಪ್ಪ ನೀಡಿದ್ದರು.  ಲೋಹ ಶಾಸ್ತ್ರದಲ್ಲಿ ಡಿಪ್ಲೊಮಾ ಪಡೆದಿರುವ ಇವರು ಉದ್ಯಮಿ. 2013 ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಅತ್ಯಲ್ಪ ಮತಗಳಿಂದ ಸೋತಿದ್ದರು.

ಎನ್‌.ರವಿಕುಮಾರ್‌: ಎನ್‌.ರವಿಕುಮಾರ್‌ ವಿದ್ಯಾರ್ಥಿ ಹೋರಾಟದಿಂದ ಬೆಳೆದು ಬಂದ ನಾಯಕ. 25 ವರ್ಷ ಎಬಿವಿಪಿ ಪೂರ್ಣಾವಧಿ ಕಾರ್ಯಕರ್ತರು. ಇವರ ಹೋರಾಟ ಮನೋಭಾವ ಮತ್ತು ಸಂಘಟನಾ ಚಾತುರ್ಯಕ್ಕಾಗಿ ಬಿಜೆಪಿಗೆ ಪ್ರಧಾನ ಕಾರ್ಯದರ್ಶಿ ಸೇರಿಸಿಕೊಳ್ಳಲಾಯಿತು. ಚಿತ್ರದುರ್ಗದಲ್ಲಿ ಕಾಲೇಜಿಗೆ ಹೋಗುವಾಗ, ಅಲ್ಲಿನ ಬಿಸ್ಕತ್ತು ಕಾರ್ಖಾನೆಯಲ್ಲಿ ಮೂಟೆ ಹೊರುವುದು ಸೇರಿದಂತೆ ಎಲ್ಲ ಕೆಲಸ ಮಾಡುತ್ತಿದ್ದರು. ಶೋಷಿತ ಸಮುದಾಯಕ್ಕೆ ಸೇರಿದವರು.

ತೇಜಸ್ವಿನಿಗೌಡ: ಪತ್ರಕರ್ತೆಯಾಗಿದ್ದ ತೇಜಸ್ವಿನಿಗೌಡ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರನ್ನು 14ನೇ ಲೋಕಸಭಾ ಚುನಾವಣೆಯಲ್ಲಿ ಸೋಲಿಸುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟರು. ಡಿ.ಕೆ.ಶಿವಕುಮಾರ್‌ ಅವರ ಜತೆಗಿನ ಮನಸ್ತಾಪದಿಂದ 2014 ರಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದರು. ವಕ್ತಾರೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೆ.ಪಿ. ನಂಜುಂಡಿ: ಟೆಲಿವಿಷನ್‌ ಧಾರಾವಾಹಿಯ ಮೂಲಕ ಜನಪ್ರಿಯರಾದ ಕೆ.ಪಿ.ನಂಜುಂಡಿ ಬಳಿಕ ಕಾಂಗ್ರೆಸ್‌ ಪಕ್ಷವನ್ನು ಸೇರಿದರು. ಆಸ್ಕರ್ ಫರ್ನಾಂಡೀಸ್‌ ಅವರ ಆಪ್ತ ಎಂದೇ ಗುರುತಿಸಿಕೊಂಡಿದ್ದ ನಂಜುಂಡಿ ಮೇಲ್ಮನೆಗೆ ನಿರಂತರ ಪ್ರಯತ್ನ ನಡೆಸಿದರು. ತಮ್ಮ ಶಕ್ತಿ ಪ್ರದರ್ಶನಕ್ಕಾಗಿ ಅವರು, ಹಲವು ಬಾರಿ ವಿಶ್ವಕರ್ಮ ಜನಾಂಗದ ಸಮಾವೇಶ ನಡೆಸಿದರು. ವಿಶ್ವಕರ್ಮ ಸಮಾಜದ ಸ್ವಾಮೀಜಿಗಳನ್ನು ಸೋನಿಯಾಗಾಂಧಿ ಬಳಿ ಕರೆದೊಯ್ದು ರಾಜಕೀಯ ಸ್ಥಾನಮಾನಕ್ಕೆ ಪ್ರಯತ್ನಿಸಿದರು. ಇವರ ಪ್ರಯತ್ನಕ್ಕೆ ಫಲ ಸಿಗಲಿಲ್ಲ.  ವಿಧಾನಸಭೆ ಚುನಾವಣೆಗೆ ಮೊದಲು ಬಿಜೆಪಿ ಸೇರಿದರು. ವಿಶ್ವಕರ್ಮ ಸಮುದಾಯಕ್ಕೆ ಬಿಜೆಪಿ ಪ್ರಾತಿನಿಧ್ಯ ನೀಡಿದೆ.

ರಘುನಾಥ ಮಲ್ಕಾಪುರೆ: ಬಿಜೆಪಿಯ ಹಿರಿಯ ನಾಯಕ ರಘುನಾಥ ಮಲ್ಕಾಪುರೆ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಎರಡನೇ ಅವಧಿಗೆ ವಿಧಾನಪರಿಷತ್ತಿಗೆ ಆಯ್ಕೆ ಆಗಿದ್ದಾರೆ.

ಕಾಂಗ್ರೆಸ್‌:

ಕೆ. ಗೋವಿಂದರಾಜ್‌: ಸಿದ್ದರಾಮಯ್ಯ ಆಪ್ತ ಎಂದೇ ಗುರುತಿಸಿಕೊಂಡಿರುವ ಕೆ.ಗೋವಿಂದರಾಜ್‌ಗೆ ವಿಧಾನಪರಿಷತ್ತಿಗೆ ಎರಡನೇ ಬಾರಿಗೆ ಆಯ್ಕೆ ಆಗಿದ್ದಾರೆ. ಈ ಹಿಂದೆ ಅವರು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಅವರಿಗೆ ಸಂಸದೀಯ ಕಾರ್ಯದರ್ಶಿಯಾಗಿದ್ದರು. ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷರೂ ಆಗಿದ್ದಾರೆ.

ಸಿ.ಎಂ.ಇಬ್ರಾಹಿಂ: ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಸಿ.ಎಂ. ಇಬ್ರಾಹಿಂ ಎಚ್‌.ಡಿ.ದೇವೇಗೌಡ ಪ್ರಧಾನಿ ಆಗಿದ್ದಾಗ ಅವರ ಸಂಪುಟದಲ್ಲಿ ಕೇಂದ್ರ ವಿಮಾನಯಾನ ಮತ್ತು ಪ್ರವಾಸೋದ್ಯಮ ಸಚಿವರಾಗಿದ್ದವರು. ಸಿದ್ದರಾಮಯ್ಯ ಜತೆಯಲ್ಲೇ  2008 ರಲ್ಲಿ ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ ಸೇರಿದರು.

ಅರವಿಂದ ಕುಮಾರ್‌ ಅರಳಿ: ಅರವಿಂದ ಕುಮಾರ್‌ ಅರಳಿ ಬೀದರ್‌ ಜಿಲ್ಲಾ ಕಾಂಗ್ರೆಸ್‌ ಸಮಿತಿ ಪ್ರಧಾನ ಕಾರ್ಯದರ್ಶಿ. ಹುಮ್ನಾಬಾದ್‌ ತಾಲ್ಲೂಕಿನ ಹಳ್ಳಿಖೇಡ ಗ್ರಾಮ ಸುಧಾರಣಾ ಸಮಿತಿಯ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸಿದ್ದರು.  ಕೆಪಿಸಿಸಿ ಕಾರ್ಯದರ್ಶಿ, ಕೇಂದ್ರ ಸರ್ಕಾರದ ಭವಿಷ್ಯನಿಧಿ ಘಟಕದ ರಾಜ್ಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಬಿ–ಟೆಕ್‌, ಎಂಎ ಪದವೀಧರ. 

ಹರೀಶ್‌ ಕುಮಾರ್‌ ಕೆ: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ಹರೀಶ್‌ ಕುಮಾರ್‌ ಬಿಲ್ಲವ ಸಮಾಜದ ಪ್ರಮುಖ ನಾಯಕ. ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ಹಂಚಿಕೆಯಲ್ಲಿ ಬಿಲ್ಲವರನ್ನು ಕಡೆಗಣಿಸಲಾಗಿತ್ತು ಎಂಬ ಅಸಮಾಧಾನ ಕೇಳಿ ಬಂದಿತ್ತು. ಬಿಲ್ಲವರನ್ನು ಸಮಾಧಾನಗೊಳಿಸಲು ಇವರಿಗೆ ಮೇಲ್ಮನೆಗೆ ಆಯ್ಕೆ ಮಾಡಲಾಗಿದೆ.

ಜೆಡಿಎಸ್‌:

ಬಿ.ಎಂ.ಫಾರೂಕ್‌: ಜೆಡಿಎಸ್‌ ವರಿಷ್ಠ ದೇವೇಗೌಡ ಮತ್ತು ಕುಮಾರಸ್ವಾಮಿ ಇಬ್ಬರಿಗೂ ಆಪ್ತರಾಗಿರುವ ಬಿ.ಎಂ.ಫಾರೂಕ್‌ ಎರಡು ಬಾರಿ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಮೂಲತಃ ದಕ್ಷಿಣಕನ್ನಡದವರಾದ ಫಾರೂಕ್‌ ಬೆಂಗಳೂರಿನಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮ ನಡೆಸುತ್ತಿದ್ದಾರೆ. ಜೆಡಿಎಸ್‌ನ ಪ್ರಭಾವಿ ಮುಸ್ಲಿಂ ನಾಯಕರೂ ಹೌದು.

ಎಸ್‌.ಎಲ್‌.ಧರ್ಮೇಗೌಡ: ಬೀರೂರಿನ ಮಾಜಿ ಶಾಸಕ ಎಸ್‌.ಎಲ್‌.ಧರ್ಮೇಗೌಡ ಮುಖ್ಯಮಂತ್ರಿ ಕುಮಾರಸ್ವಾಮಿ ಆಪ್ತರು. ಕೊನೆಯ ಕ್ಷಣದಲ್ಲಿ ಪಕ್ಷ ಇವರ ಹೆಸರು ಅಂತಿಮಗೊಳಿಸಿತು. ವೃತ್ತಿಯಲ್ಲಿ ಕೃಷಿಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT