ಸಂಕೇಶ್ವರ (ಬೆಳಗಾವಿ ಜಿಲ್ಲೆ): ಕೇಂದ್ರದ ಮಾಜಿ ಸಚಿವ ಬಿ. ಶಂಕರಾನಂದ ಅವರ ಹಿರಿಯ ಪುತ್ರ, ಮಾಜಿ ಸಚಿವ ಓಂಪ್ರಕಾಶ ಕಣಗಲಿ (69) ಅನಾರೋಗ್ಯದಿಂದ ಮಂಗಳವಾರ ಇಲ್ಲಿನ ಕೆಎಲ್ಇ ಅಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ ಪತ್ನಿ, ಪುತ್ರ, ಪುತ್ರಿ, ಸಹೋದರ ಹಾಗೂ ಆರು ಮಂದಿ ಸಹೋದರಿಯರು ಇದ್ದಾರೆ.
ಅಂತ್ಯಕ್ರಿಯೆ ಸ್ವಗ್ರಾಮ ಸಂಕೇಶ್ವರ ಸಮೀಪದ ಕಣಗಲಾದಲ್ಲಿ ನಡೆಯಿತು. ಸಂಸದ ಪ್ರಕಾಶ ಹುಕ್ಕೇರಿ, ಮಾಜಿ ಸಚಿವರಾದ ವೀರಕುಮಾರ ಪಾಟೀಲ, ಎ.ಬಿ. ಪಾಟೀಲ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ಮಾಜಿ ಸಂಸದ ಎಸ್.ಬಿ. ಸಿದ್ನಾಳ ಅಂತಿಮ ನಮನ ಸಲ್ಲಿಸಿದರು.
ವಕೀಲರಾಗಿದ್ದ ಓಂಪ್ರಕಾಶ, ಎಂ. ವೀರಪ್ಪ ಮೊಯ್ಲಿ ಅವರ ಮಂತ್ರಿ ಮಂಡಲದಲ್ಲಿ ನೀರಾವರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಹುಕ್ಕೇರಿ ತಾಲ್ಲೂಕಿನ ಕೊಟಬಾಗಿ ಏತ ನೀರಾವರಿ ಯೋಜನೆ ಸೇರಿ ಹಲವು ಯೋಜನೆಗಳನ್ನು ಜಿಲ್ಲೆಗೆ ಕೊಡುಗೆ ನೀಡಿದವರು. ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿಯಾಗಿದ್ದರು. ದಲಿತ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ದಲಿತ ಸಾಹಿತ್ಯ ಕಾರ್ಯಕ್ರಮ ಆಯೋಜಿಸಿ ಜಿಲ್ಲೆಯಲ್ಲಿ ದಲಿತ ಚಳವಳಿಗೆ ಮರುಹುಟ್ಟು ನೀಡಿದರು. ಚಿಕ್ಕೋಡಿ ತಾಲೂಕಿನಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಹೆಸರಿನಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ನೋಂದಣಿ ಮಾಡಿಸಿದ್ದರು.