ಕೊರಟಗೆರೆ: ತಾಲ್ಲೂಕಿನ ಬಜ್ಜನಹಳ್ಳಿ ಬಳಿ ಇದ್ದ ಕಣ್ವ ಫ್ಯಾಷನ್ ಸಿದ್ಧ ಉಡುಪು ತಯಾರಿಕಾ ಕಾರ್ಖಾನೆ ಗುರುವಾರ ಮುಚ್ಚಿದ್ದು, ನೂರಾರು ಕಾರ್ಮಿಕರು ಬೀದಿಪಾಲಾಗಿದ್ದಾರೆ.
ಕಾರ್ಖಾನೆ ಉತ್ಪಾದನೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಕಾರ್ಮಿಕರಿಗೆ ಒಂದು ವರ್ಷದ ಪಿಎಫ್ ಸೇರಿದಂತೆ ಮೂರ್ನಾಲ್ಕು ತಿಂಗಳ ಸಂಬಳ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಸೆ. 13ರಂದು ಭವಿಷ್ಯನಿಧಿ ಹಾಗೂ ಸಂಬಳಕ್ಕಾಗಿ ಒತ್ತಾಯಿಸಿ ಕಾರ್ಖಾನೆ ಮುಂದೆ ಪ್ರತಿಭಟನೆ ನಡೆಸಿದ್ದರು.
ಈ ವೇಳೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸಿದಾಗ ಕಾರ್ಖಾನೆ ವ್ಯವಸ್ಥಾಪಕರು ಬಾಕಿ ಇರುವ ಸಂಬಳ ಹಾಗೂ ಭವಿಷ್ಯನಿಧಿ ಹಣ ನೀಡುವ ಭರವಸೆ ನೀಡಿದ್ದರು. ಆದರೆ, ಗುರುವಾರ ಏಕಾಏಕಿ ಕಾರ್ಖಾನೆ ಬಾಗಿಲು ಹಾಕಲಾಗಿದೆ.
ಅಲ್ಲದೇ ಕಾರ್ಮಿಕರು ರಾಜೀನಾಮೆ ನೀಡಿದರೆ ಮಾತ್ರ ಬಾಕಿ ಹಣ ನೀಡುವುದಾಗಿ ಹೇಳಿ ಕಾರ್ಮಿಕರಿಂದ ಬಲವಂತವಾಗಿ ರಾಜಿನಾಮೆ ಪತ್ರಗಳನ್ನು ಗುರುವಾರ ಪಡೆಯಲಾಗಿದೆ. ಕೆಲವರು ಶುಕ್ರವಾರ ಕಾರ್ಖಾನೆಗೆ ಭೇಟಿ ನೀಡಿ ಇಚ್ಛೆ ಇಲ್ಲದಿದ್ದರೂ ರಾಜೀನಾಮೆ ನೀಡುತ್ತಿರುವುದಾಗಿ ಪತ್ರ ಬರೆದು ನೀಡಿದರು.