ಉಡುಪಿ: ‘ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಮತ್ತೊಮ್ಮೆ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಅವರು ದೃಢಸಂಕಲ್ಪ ಮಾಡಿ ಶೀಘ್ರವೇ ಗೋ ರಕ್ಷಣೆ ಕುರಿತಂತೆ ಇಡೀ ದೇಶಕ್ಕೆ ಅನ್ವಯವಾಗುವ ಕಾನೂನು ಜಾರಿಗೆ ತರಬೇಕು’ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಒತ್ತಾಯಿಸಿದರು.
ಉಡುಪಿ ರಥಬೀದಿಯಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕಾನೂನು ಜಾರಿಗೆ ಅವರಿಗೆ ಯಾವುದೇ ಪಕ್ಷದ ಬೆಂಬಲವೂ ಬೇಕಾಗಿಲ್ಲ. ಗೋವುಗಳ ರಕ್ಷಣೆ ಕೇವಲ ಧಾರ್ಮಿಕ ದೃಷ್ಟಿಯಿಂದ ಮಾತ್ರವಲ್ಲ, ಆರ್ಥಿಕ ದೃಷ್ಟಿಯಿಂದಲೂ ಮುಖ್ಯವಾಗಿದೆ. ಪಶು ಸಂತತಿ ಉಳಿದರೆ ಮಾತ್ರ ನಾವು ಸಂತೋಷದಿಂದ ಬದುಕಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.
‘ಹುಲಿ, ಸಿಂಹ ಸೇರಿದಂತೆ ಅಳಿವಿನಂಚಿನಲ್ಲಿರುವ ವನ್ಯಜೀವಿಗಳ ರಕ್ಷಣೆಗೆ ಸರ್ಕಾರ ಗಮನ ಕೊಡುತ್ತದೆ. ಸಿಂಹ, ಹುಲಿಗಳಿಗಿಂತಲೂ ಗೋವಿನ ಸಂತತಿ ಕಡಿಮೆಯಾಗಿದೆ. ಆದರೆ, ಈ ಸಂತತಿ ಉಳಿಯಬೇಕೆಂಬ ಕಾಳಜಿ ಯಾವ ಸರ್ಕಾರಕ್ಕೂ ಇಲ್ಲ’ ಎಂದು ದೂರಿದರು.
‘ಗೋ ಹತ್ಯೆ ಹೇಯ ಕೃತ್ಯ’
‘ಗೋವುಗಳನ್ನು ಕೊಲ್ಲುವ ಮನಃಸ್ಥಿತಿ ಹೊಂದಿರುವವರು ಮನುಷ್ಯರೇ ಅಲ್ಲ, ಅವರು ರಾಕ್ಷಸ ವರ್ಗಕ್ಕೆ ಸೇರುತ್ತಾರೆ. ಗೋ ಹತ್ಯೆ ಮಾಡಿ ಗೋ ಮಾಂಸ ಸೇವಿಸುವುದು ಅತ್ಯಂತ ಹೇಯವಾದ ಕಾರ್ಯ’ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.