ಬೆಂಗಳೂರು:‘ಮಾತೆತ್ತಿದರೆ ಉತ್ತರಕರ್ನಾಟಕ... ಉತ್ತರಕರ್ನಾಟಕ ಎನ್ನುತ್ತೀರಿ. ಈವರೆಗೆ ಆ ಭಾಗಕ್ಕೆ ಎಷ್ಟು ಹಣ ನೀಡಲಾಗಿದೆ ಎಂಬ ಬಗ್ಗೆ ಚರ್ಚೆ ಆಗಲಿ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ರೇಗಿದರು.
ಮೈತ್ರಿ ಸರ್ಕಾರದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಅನುದಾನ ಹಂಚಿಕೆಯಲ್ಲಿ ಅನ್ಯಾಯ ಆಗಿದೆ ಎಂದು ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಹೇಳಿದಾಗ ಕುಮಾರಸ್ವಾಮಿ ಸಿಟ್ಟಿಗೆದ್ದರು.
‘ನಿಮ್ಮ ಭಾಗಕ್ಕೆ ಕೊಟ್ಟಷ್ಟು ಹಣ ಬೇರೆ ಕಡೆಗೆ ಕೊಟ್ಟಿಲ್ಲ. ಇಲ್ಲಿ ಉತ್ತರ, ಮಧ್ಯ ಮತ್ತು ದಕ್ಷಿಣ ಕರ್ನಾಟಕ ಎಂಬ ತಾರತಮ್ಯ ಬೇಕಿಲ್ಲ. ಸಮಗ್ರ ಕರ್ನಾಟಕದ ಬಗ್ಗೆ ಮಾತನಾಡಬೇಕು. ನೀರಾವರಿಗೆ ಆ ಭಾಗಕ್ಕೆ ಯಾವಾಗ ಎಷ್ಟು ಹಣ ಬಿಡುಗಡೆ ಆಗಿದೆ ಎಂಬುದು ಗೊತ್ತಿಲ್ಲವೆ’ ಎಂದು ಪ್ರಶ್ನಿಸಿದರು.
ಕರ್ನಾಟಕ ಏಕೀಕರಣ ಆದ ದಿನದಿಂದ ರಾಜ್ಯದ ಯಾವ ಭಾಗಕ್ಕೆ ಎಷ್ಟು ಹಣಕ್ಕೆ ಬಿಡುಗಡೆ ಮಾಡಲಾಗಿದೆ ಎಂಬ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಲಿ. ಆಲಮಟ್ಟಿ ಜಲಾಶಯ ನಿರ್ಮಾಣಕ್ಕೆ ನೀಡಿದ ಹಣದ ಬಗ್ಗೆಯೂ ಚರ್ಚೆ ಆಗಲಿ ಎಂದು ಅವರು ಹೇಳಿದರು.