ಹುಮನಾಬಾದ್: ‘ಮಾನಸ ಗಂಗೋತ್ರಿ ಶಿಕ್ಷಣ ಸಂಸ್ಥೆಯಲ್ಲಿನ ಪಠ್ಯ ಬೋಧನೆ ಹಾಗೂ ಪಠ್ಯೇತರ ಚಟುವಟಿಕೆ ರಾಜಧಾನಿಯಂಥ ಮಹಾನಗರಗಳಲ್ಲಿ ಶಾಲೆಗಳಿಂತ ಕಡಿಮೆ ಇಲ್ಲ’ ಎಂದು ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ವೀರಣ್ಣ ತುಪ್ಪದ್ ಹೇಳಿದರು.
ವಾಂಜ್ರಿ ಬಡಾವಣೆಯ ಅರುಣೋದಯ ಶಿಕ್ಷಣ ದತ್ತಿಯ ಅಡಿಯಲ್ಲಿ ನಡೆಯುತ್ತಿರುವ ಮಾನಸ ಗಂಗೋತ್ರಿ ಶಾಲೆಯಲ್ಲಿ ಮಾತಂಗ ಸಾಂಸ್ಕೃತಿಕ ಪ್ರತಿಷ್ಠಾನ ಭಾನುವಾರ ಏರ್ಪಡಿಸಿದ್ದ ಚಿಣ್ಣರ ಹಬ್ಬ ಉದ್ಘಾಟಿಸಿ, ಅವರು ಮಾತನಾಡಿದರು.
‘ಮಕ್ಕಳಲ್ಲಿನ ಸಾಮಾನ್ಯ ಜ್ಞಾನ, ಗಣಿತ ಪ್ರಾವೀಣ್ಯತೆ, ಇಂಗ್ಲಿಷ್ನಲ್ಲಿ ಮಾತನಾಡುವ ಶೈಲಿ ಜೊತೆಗೆ ಅತ್ಯಲ್ಪ ದಿನಗಳಲ್ಲಿ ಪಡೆದ ತರಬೇತಿಯಿಂದ ಅದ್ಭುತ ಪ್ರದರ್ಶನ ನೀಡಿದ ಮಕ್ಕಳ ಪ್ರತಿಭೆ ಮೆಚ್ಚುವಂಥದ್ದು’ ಎಂದು ಹೇಳಿದರು.
ಶಿಕ್ಷಣ ಸಂಯೋಜಕ ರಮೇಶ ರಾಜೋಳೆ ಮಾತನಾಡಿ, ‘ಶಿಕ್ಷಣ ಸಂಸ್ಥೆಗಳು ವಾಣಿಜ್ಯ ಉದ್ದೇಶದಿಂದ ಹುಟ್ಟಿಕೊಳ್ಳುತ್ತಿರುವ ಈ ವೇಳೆ ಮಾನಸ ಗಂಗೋತ್ರಿ ಅಧ್ಯಕ್ಷ ಅನಿಲ ಕಟ್ಟಿ ಅವರು ತಮ್ಮನ್ನು ತಾವು ಈ ಭಾಗದ ಗ್ರಾಮೀಣ ಪ್ರದೇಶದ ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಜ್ಞಾನ ದಾಸೋಹದಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘ ನೀಯ’ ಎಂದರು.
ಸಿ.ಆರ್.ಪಿ ಪ್ರಕಾಶ ಬೊಂಬಳಗಿ ಹಾಗೂ ತಾಲ್ಲೂಕಿನ ಸಿಆರ್ಸಿ ಅಧಿಕಾರಿಗಳು ಇದ್ದರು. ಶಾಂತಾಬಾಯಿ ಕಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಅಂಬಾ ಭವಾನಿಯ ನವ ಅವತಾರ, ಯಕ್ಷಗಾನ ನೃತ್ಯ, ದೇಶಭಕ್ತಿ ಗೀತೆ ಆಧಾರಿತ ನೃತ್ಯ, ಕನ್ನಡ ಹಳೆ ಸಿನಿಮಾಗಳ ರಿಮೆಕ್ ಹಾಡುಗಳಿಗೆ ಮಕ್ಕಳು ಹಾಕಿದ ಹೆಜ್ಜೆ ಗಮನ ಸೆಳೆಯಿತು.